ಮುಂಬೈ: ದೇಶದ ಮಹಾನಗರ ಮುಂಬೈನಲ್ಲಿ ಕೊರಾನಾ ವೈರಸ್ ಹರಡಲು ‘ನಮಸ್ತೆ ಟ್ರಂಪ್’ ಕಾರ್ಯಕ್ರಮವೇ ಕಾರಣ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಅಹಮದಾಬಾದ್ನಲ್ಲಿ ಫೆಬ್ರವರಿ 24ರಂದು ನಡೆದ ರೋಡ್ ಶೋನಲ್ಲಿ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ವೇಳೆ ಸಾವಿರಾರು ಜನರು ಹಾಜರಿದ್ದರು. ನಂತರ ಉಭಯ ನಾಯಕರು ಮೊಟೆರಾ ಕ್ರಿಕೆಟ್ ಮೈದಾನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಇದನ್ನೂ ಓದಿ: ಟ್ರಂಪ್ರನ್ನ ಭಾರತಕ್ಕೆ ಕರೆತರದಿದ್ದರೆ ಕೊರೊನಾ ಹೆಚ್ಚಾಗ್ತಿರಲಿಲ್ಲ: ಸಿದ್ದರಾಮಯ್ಯ
ಈ ವಿಚಾರವಾಗಿ ಮಾತನಾಡಿರುವ ರಾವತ್ ಅವರು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ನೆರೆದಿದ್ದ ಸಭೆಯಿಂದಾಗಿ ಗುಜರಾತ್ನಲ್ಲಿ ಕೊರೊನಾ ವೈರಸ್ ಹರಡಿತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಟ್ರಂಪ್ ಅವರೊಂದಿಗೆ ಬಂದ ತಂಡದ ಕೆಲವು ಸದಸ್ಯರು ದೆಹಲಿಯ ಮುಂಬೈಗೆ ಬಂದಿದ್ದು ಸೋಂಕು ಹರಡಲು ಕಾರಣವಾಗಿದೆ. ಗುಜರಾತ್ನಲ್ಲಿ ಕೋವಿಡ್-19ನ ಮೊದಲ ಪ್ರಕರಣ ಮಾರ್ಚ್ 20ರಂದು ವರದಿಯಾಗಿತ್ತು. ಅಂದು ರಾಜ್ಕೋಟ್ನ ಪುರುಷ ಮತ್ತು ಸೂರತ್ನ ಮಹಿಳೆ ಸೋಂಕು ದೃಢಪಟ್ಟಿತ್ತು ಎಂದು ದೂರಿದ್ದಾರೆ.
ಯಾವುದೇ ಯೋಜನೆ ಇಲ್ಲದೆ ಲಾಕ್ಡೌನ್ ಜಾರಿಗೆ ತರಲಾಗಿತ್ತು. ಆದರೆ ಈಗ ಅದನ್ನು ತೆಗೆದುಹಾಕುವ ಜವಾಬ್ದಾರಿಯನ್ನು ರಾಜ್ಯಗಳಿಗೆ ಬಿಡಲಾಗಿದೆ. ಈ ಅನಿಶ್ಚಿತತೆಯು ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತದೆ. ಇಂತಹ ಅವ್ಯವಸ್ಥೆಯು ಕೊರೊನಾ ಬಿಕ್ಕಟ್ಟನ್ನು ಹೆಚ್ಚಿಸಲು ಮಾತ್ರ ಸಹಾಯ ಮಾಡುತ್ತದೆ. ಲಾಕ್ಡೌನ್ನ ವೈಫಲ್ಯದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸ್ಪಷ್ಟವಾಗಿ ವಿಶ್ಲೇಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ರಾಜಕೀಯ ಮಾಡುತ್ತಿರುವುದು ಆಶ್ಚರ್ಯಕರವಾಗಿದೆ. ಸೋಂಕನ್ನು ಎದುರಿಸಲು ವಿಫಲವಾದರೆ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕಾ? ಹಾಗಾದರೆ ಈ ನಿಯಮವನ್ನು ಇತರ 17 ರಾಜ್ಯಗಳಲ್ಲಿಯೂ ಜಾರಿಗೆ ತರಬೇಕು. ಈ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೂ ಇದೆ ಎಂದು ವಾಗ್ದಾಳಿ ನಡೆಸಿದರು.