ಹಾಸನ: ಹಾಸನ ನಗರಸಭೆ ಅಧ್ಯಕ್ಷಗಾದಿಯನ್ನು ಎಸ್ಟಿ ಅಭ್ಯರ್ಥಿಗೆ ಮೀಸಲಿರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಹಾಸನದಲ್ಲಿ ಶಾಸಕ ಹೆಚ್ಡಿ.ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಹಾಸನ ನಗರಸಭೆ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದು ಖಚಿತವಾಗಿದ್ದು, ಬಹುಮತವಿದ್ದರೂ ಜೆಡಿಎಸ್ ಪಕ್ಷ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದೆ. ಈ ಬಗ್ಗೆ ಹಾಸನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಮೀಸಲು ನಿಗದಿಯಲ್ಲಿ ನ್ಯಾಯ ದೇವತೆಗೆ ಅನ್ಯಾಯ ಮಾಡಿದ್ದಾರೆ ಎಂದರು. ಇದನ್ನು ಓದಿ: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ
ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬೆಳೆಯುತ್ತದೆ ಎಂಬ ಭಯ ಇರಬಹುದು. ಜಿಲ್ಲೆಯಲ್ಲಿ ಹಿಂದೆ ಕಾಂಗ್ರೆಸ್ ಮಾಡಿದ್ದನ್ನು ಈಗ ಬಿಜೆಪಿಯವರು ಮಾಡಿದ್ದಾರೆ. ಹರಿಹರ ನಗರಸಭೆಗೆ ಮೀಸಲಾಗಿದ್ದ ಎಸ್ಟಿ ಮೀಸಲಾತಿಯನ್ನು ಹಾಸನ ನಗರಸಭೆಗೆ ಹಾಕಿದ್ದಾರೆ. ರಾಜ್ಯದಲ್ಲಿ ಎಸ್ಟಿಗೆ ಮೀಸಲು ಇರುವುದು ಎರಡೇ ಸ್ಥಾನ. ಅದು ಕೊಪ್ಪಳ ಮತ್ತು ಹರಿಹರಕ್ಕೆ ಇದನ್ನು ಅಡ್ವೋಕೇಟ್ ಜನರಲ್ ಹೈಕೋರ್ಟಿಗೂ ನೀಡಿದ್ದರು. ಆದರೀಗ ರಾತ್ರೋರಾತ್ರಿ ಬದಲು ಮಾಡಿದ್ದಾರೆ ಎಂದು ಆರೋಪ ಮಾಡಿದರು.
ನ್ಯಾಯಾಲಯ ಇದನ್ನು ಗಮನಿಸಿ ಸ್ವಯಂಪ್ರೇರಿತ ಕೇಸ್ ತಗೆದುಕೊಳ್ಳಬೇಕು. ಕೋರ್ಟಿಗೆ ಮರೆ ಮಾಚಿರುವ ಅಡ್ವೋಕೇಟ್ ಜನರಲ್ಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಜೆಡಿಎಸ್ ಬಹುಮತ ಇದೆ ಎಂದು ಬೇಕಂತಲೇ ಅಧಿಕಾರ ತಪ್ಪಿಸಿದ್ದಾರೆ. ಇದಕ್ಕಾಗಿ 7 ತಿಂಗಳಿಂದ ಸರ್ಕಸ್ ಮಾಡಿದ್ದಾರೆ. ಯಡಿಯೂರಪ್ಪಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇದೆಯೇ? ಇದರ ವಿರುದ್ಧ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.