– ಮಂಗಳೂರು ಪೊಲೀಸರಿಗೆ ಸಿಕ್ಕಿಬಿದ್ದ ಖದೀಮರು
ಮಂಗಳೂರು: ಪೊಲೀಸರ ಕಣ್ಣು ತಪ್ಪಿಸಲು ಮೀನು ಸಾಗಾಟದ ಲಾರಿಯಲ್ಲಿ ಗಾಂಜಾ ಸಾಗಾಟ ಮಾಡಿ ಮಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಗಾಂಜಾ ಸಾಗಾಟದ ಜಾಲವನ್ನು ಭೇದಿಸಿದ್ದ ಮಂಗಳೂರು ಪೊಲೀಸರು ಬರೋಬ್ಬರಿ 200 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಗತ್ಯ ವಸ್ತುಗಳ ಸಾಗಾಟದ ಲಾರಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದ್ದು ಮಂಗಳೂರಿನ ಉಳ್ಳಾಲ ಬಳಿ ನಾಲ್ವರು ಆರೋಪಿಗಳನ್ನು ಲಾರಿ ಸಮೇತ ಬಂಧಿಸಲಾಗಿದೆ. ಆಂಧ್ರಪ್ರದೇಶದಿಂದ ಆಲ್ ಇಂಡಿಯಾ ಪರ್ಮಿಟ್ ಇದ್ದ ಮೀನು ಸಾಗಾಟದ ಲಾರಿಯಲ್ಲಿ ಮೀನಿನ ಬಾಕ್ಸ್ ಗಳಲ್ಲಿ ಗಾಂಜಾ ತರುತ್ತಿದ್ದರು. ಈ ಲಾರಿಗೆ ಕಾರೊಂದರಲ್ಲಿ ಎಸ್ಕಾರ್ಟ್ ನೀಡಲಾಗುತ್ತಿತ್ತು.
ಈ ವೇಳೆ ತಪಾಸಣೆ ನಡೆಸಿದ ಪೊಲೀಸರು ಕಾಸರಗೋಡು ಮೂಲದ ಮೊಹಮ್ಮದ್ ಫಾರೂಕ್, ಮೊಯ್ದೀನ್ ನವಾಝ್, ಮಡಿಕೇರಿಯ ಸೈಯದ್ ಮೊಹಮ್ಮದ್, ಮಂಗಳೂರಿನ ಮೊಹಮ್ಮದ್ ಅನ್ಸಾರ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ತಂದ ಗಾಂಜಾವನ್ನು ದಕ್ಷಿಣ ಕನ್ನಡ, ಮಡಿಕೇರಿ, ಹಾಸನ ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಸಾಗಾಟ ಮಾಡಲು ಯತ್ನಿಸಿದ್ದರು. ಆರೋಪಿಗಳಿಂದ 200 ಕೆಜಿ ಗಾಂಜಾ, 3 ತಲ್ವಾರ್, ಒಂದು ಚೂರಿ, ಒಂದು ಕಾರು ಹಾಗೂ ಒಂದು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.