ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಬಂದರಿನಲ್ಲಿ ಮೀನುಗಾರರ ನಡುವೆ ಜಟಾಪಟಿ ನಡೆದಿದೆ. ಕೊನೆಗೆ ಪೊಲೀಸರು ಲಾಠಿಚಾರ್ಜ್ ಮಾಡಿ ಮೀನುಗಾರರನ್ನು ಚದುರಿಸಿದ್ದಾರೆ.
ಕಾಮಗಾರಿ ಪೂರ್ಣಗೊಳಿಸಿ ನಂತರ ಮೀನು ಹರಾಜು ಮಾಡಲು ಆಗ್ರಹಿಸಿ, ಸದ್ಯ ಬಂದರಿನಲ್ಲಿ ಮೀನು ಹರಾಜು ಬೇಡ ಅನ್ನೋದು ಒಂದು ತಂಡದ ವಾದ. ಆದರೆ ಮತ್ತೊಂದು ತಂಡ ಮೀನು ಹರಾಜಿಗೆ ಮುಂದಾಗಿದೆ. ಈ ವೇಳೆ ಸ್ಥಳೀಯ ಮತ್ತು ಆಸುಪಾಸಿನ ಮೀನುಗಾರರ ನಡುವೆ ಗದ್ದಲ ಏರ್ಪಟ್ಟಿದೆ.
ಇತ್ತಂಡಗಳ ನಡುವೆ ಮಾತಿನ ಸಮರ ನಡೆಯುತ್ತಿದ್ದರಿಂದ ಹಿನ್ನೀರಿನಲ್ಲೇ ಬೋಟುಗಳು ಲಂಗರು ಹಾಕಿದವು. ಕೊನೆಗೆ ನಡುವಲ್ಲಿ ನಿಂತು ಪೊಲೀಸರು ಸಂಧಾನ ಮಾಡಲು ಯತ್ನಿಸಿದ್ದಾರೆ. ಆದರೆ ಎರಡೂ ತಂಡಗಳ ನಡುವೆ ವಾದ-ವಿವಾದ ಮುಂದುವರಿದಿದ್ದರಿಂದ ಕೆಲಕಾಲ ಬಂದರು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.