ಮೈಸೂರು: ಮಾಧ್ಯಮ, ಮಾನವ ಹಕ್ಕುಗಳ ಹೆಸರಲ್ಲಿ ವೈದ್ಯರಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮೂವರು ಯುವತಿಯರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಬೆದರಿಕೆ ಹಾಕಿ ವೈದ್ಯನಿಂದ ಹಣ ಪಡೆಯಲು ವಿಫಲ ಯತ್ನ ನಡೆಸಿದ ಅಮ್ರೀನ್, ಆಯಿಷಾ ಬಾಯಿ, ಶಹೀನಾ ನವೀದ್ ಎಂಬ ಯುವತಿಯರನ್ನು ಬಂಧಿಸಲಾಗಿದೆ. ಕೆ.ಆರ್.ಆಸ್ಪತ್ರೆ ವೈದ್ಯ ಡಾ.ರಾಜೇಶ್ ಎಂಬವರಿಗೆ ಈ ಯುವತಿಯರು ಬೆದರಿಕೆ ಹಾಕಿದ್ದರು.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ನೀವು ರೋಗಿಗಳಿಂದ ಹಣ ಪಡೆದುಕೊಂಡಿದ್ದೀರಿ. ಅದಕ್ಕೆ ಸಂಬಂಧಪಟ್ಟ ವೀಡಿಯೋ ಸಾಕ್ಷಿಗಳ ನಮ್ಮ ಬಳಿ ಇವೆ ಎಂದು ಹೆದರಿಸಿದ್ದರು. ಪ್ರಕರಣ ಮುಚ್ಚಿಹಾಕಲು 5 ಲಕ್ಷ ರೂ. ಗಳಿಗೆ ಡಿಮಾಂಡ್ ಮಾಡಿ 50 ಸಾವಿರ ರೂ. ಅಡ್ವಾನ್ಸ್ ಪಡೆದು ತೆರಳಿದ್ದರು. ಉಳಿದ ಹಣ ನೀಡುವಂತೆ ಒತ್ತಾಯಿಸಿ ಮಂಡಿ ಮೊಹಲ್ಲಾದ ಸಂಜೀವಿನಿ ಆಸ್ಪತ್ರೆ ಎದುರು ಗಲಾಟೆ ಮಾಡಿದ್ದರು. ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇವರ ಗುರುತಿನ ಚೀಟಿಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಸುವರ್ಣ ಕಾವೇರಿ ಎಕ್ಸ್ಪ್ರೆಸ್ ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರ್ತಿ ಆಯಿಷಾ ಬಾಯಿ, ಕ್ರೈಂ ವರದಿಗಾರ್ತಿ ಅಮ್ರೀನ್ ಎಂದು ಹೇಳಿ ಕೊಂಡಿದ್ದರು. ಮೈಸೂರಿನಲ್ಲಿ ಸುವರ್ಣ ಕಾವೇರಿ ಎಕ್ಸ್ ಪ್ರೆಸ್ ಎನ್ನುವ ಮಾಧ್ಯಮ ಸಂಸ್ಥೆಯೇ ಇಲ್ಲ. ಅಲ್ಲದೆ ಸಿಟಿಜನ್ ಲೇಬರ್ ವೆಲ್ಫೇರ್ ಎನ್ನುವ ಸಾಂವಿಧಾನಿಕ ಸಂಸ್ಥೆಯೂ ಇಲ್ಲ. ಮೋಸ ಮಾಡುವ ಉದ್ದೇಶದಿಂದ ನಕಲಿ ಐಡಿ ಕಾರ್ಡ್ಗಳ ಬಳಕೆ ಸಾಬೀತಾಗಿದೆ.