ಮಂಗಳೂರು: ಕೊರೊನಾ ವೈರಸ್ ಮಹಾಮಾರಿ ವಕ್ಕರಿಸಿದಾಗಿನಿಂದ ದೇಶಾದ್ಯಂತ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ ಇದೀಗ ಮಾಸ್ಕ್ ಧರಿಸಿ ಅಂದಿದ್ದಕ್ಕೆ ಯುವಕರ ತಂಡವೊಂದು ಹಲ್ಲೆ ಮಾಡಿದೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ರಿಲಯನ್ಸ್ ಮಾರ್ಟ್ ನಲ್ಲಿ ನಡೆದಿದೆ. ಮಾಸ್ಕ್ ಧರಿಸಿ ಅಂಗಡಿಯೊಳಗೆ ಬರಲು ಸೂಚಿಸಿದ್ದರಿಂದ ಕೋಪಗೊಂಡ ಯುವಕರ ಗುಂಪು ಹಲ್ಲೆ ಮಾಡಿದೆ.
ಯುವಕರ ಗುಂಪೊಂದು ಮಾಸ್ಕ್ ಧರಿಸದೇ ಅಂಗಡಿ ಪ್ರವೇಶಿಸಲು ಯತ್ನಿಸಿದೆ. ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಮಾಸ್ಕ್ ಧರಿಸಿ ಬರುವಂತೆ ತಡೆದಿದ್ದಾರೆ. ಈ ವೇಳೆ ಗುಂಪು ಸೆಕ್ಯೂರಿಟಿ ಜೊತೆ ಘರ್ಷಣೆಗಿಳಿದಿದೆ. ಅಲ್ಲದೆ ರಿಲಯನ್ಸ್ ಮಾರ್ಟ್ ಸಿಬ್ಬಂದಿ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿದೆ.
ಮಾಸ್ಕ್ ವಿಚಾರದಲ್ಲಿ ಸಿಬ್ಬಂದಿ ಮತ್ತು ಯುವಕರ ತಂಡದ ನಡುವೆ ಮಾರಾಮಾರಿ ನಡೆದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.