ಹೈದರಾಬಾದ್: ಮಾಹಾಮಾರಿ ಕೊರೊನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಮಧ್ಯೆ ಮಾಸ್ಕ್ ಧರಿಸದ ಸರ್ಕಲ್ ಇನ್ಸ್ಪೆಕ್ಟರ್ಗೆ ದಂಡ ವಿಧಿಸಿದ ಘಟನೆಯೊಂದು ಹೈದರಾಬಾದ್ನಲ್ಲಿ ನಡೆದಿದೆ.
ಸಾರ್ಕರದ ನಿಯಮಗಳು ಎಲ್ಲರಿಗೂ ಒಂದೇ ಎಂಬುದನ್ನು ಪೊಲೀಸ್ ವರಿಷ್ಠಾಧಿಕಾರಿ ನಿರೂಪಿಸುವ ಮೂಲಕವಾಗಿ ಇತರರಿಗೆ ಮಾದರಿಯಾಗಿದ್ದಾರೆ. ಗುಂಟೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಅಮ್ಮಿರೆಡ್ಡಿ ಮಾಸ್ಕ್ ಧರಿಸದವರ ವಿರುದ್ಧ ಭಾನುವಾರ ವಿಶೇಷ ಕಾರ್ಯಾಚರಣೆ ಮಾಡುತ್ತಿದ್ದರು. ಈ ವೇಳೆ ತಳ್ಳೂರು ವೃತ್ತ ನಿರೀಕ್ಷಕ ಮಲ್ಲಿಕಾರ್ಜುನ್ ರಾವ್ ಮಾಸ್ಕ್ ಧರಿಸದೆಯೇ ತಮ್ಮ ಮುಂದೆ ಹಾದು ಹೋಗಿದ್ದನ್ನು ಅಮ್ಮಿರೆಡ್ಡಿಯವರು ಗಮನಿಸಿದ್ದಾರೆ.
ನಂತರ ಮಲ್ಲಿಕಾರ್ಜುನ್ ರಾವ್ ಅವರಿಗೆ ಮಾಸ್ಕ್ ಧರಿಸದೆ ಇರಲು ಕಾರಣವೇನು ಎಂದು ಕೇಳಿದ್ದಾರೆ. ಕೆಲಸಕ್ಕೆ ಬರುವ ಅವಸರದಲ್ಲಿ ಮರೆತೆ ಅಂತೆ ಮಲ್ಲಿಕಾರ್ಜುನ್ ಹೇಳಿದ್ದಾರೆ. ಈ ವೇಳೆ ಅವರಿಗೆ ದಂಡವನ್ನು ವಿಧಿಸಿ ಹಾಗೂ ತಾವೇ ಮಾಸ್ಕ್ ಅನ್ನು ಮಲ್ಲಿಕಾರ್ಜುನ್ ಅವರಿಗೆ ಹಾಕಿದ್ದಾರೆ. ಅಲ್ಲದೆ ಎಲ್ಲರಿಗೂ ಒಂದೇ ನಿಯಮ, ಕಾನೂನು ಎಂದು ಹೇಳಿದ್ದಾರೆ.
ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಎಸ್ಪಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.