ವಾಷಿಂಗ್ಟನ್: ಭಾರತದ ಕೃಷಿ ಕಾನೂನುಗಳಿಗೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದ್ದು, ಈ ಬಗ್ಗೆ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರೊಬ್ಬರು ಹೇಳಿಕೆ ನೀಡಿದ್ದಾರೆ.
3 ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಅಮೆರಿಕದ ಈ ಹೇಳಿಕೆ ಈಗ ವಿಶ್ವದ ಗಮನ ಸೆಳೆದಿದೆ. ಭಾರತದ ಹೊಸ ಕೃಷಿ ಕಾನೂನುಗಳು ಮಾರುಕಟ್ಟೆಯ ದಕ್ಷತೆಯನ್ನು ಹೆಚ್ಚಿಸುತ್ತವೆ. ಅಲ್ಲದೆ ಖಾಸಗಿ ವಲಯದವರು ಹೂಡಿಕೆ ಮಾಡಲು ಸೆಳೆಯುತ್ತವೆ ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ತಿಳಿಸಿದ್ದಾರೆ.
US backs India’s new farm laws, says these reforms will improve efficiency of markets
Read @ANI Story | https://t.co/3ovH5Hf2gO pic.twitter.com/iOzaCzPCEA
— ANI Digital (@ani_digital) February 4, 2021
ಬೆಳವಣಿಗೆ ಹೊಂದುತ್ತಿರುವ ಪ್ರಜಾಪ್ರಭುತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಳು ನಡೆಯಬೇಕು. ಮಾತುಕತೆ ಮೂಲಕ ಗೊಂದಲವನ್ನು ಬಗೆಹರಿಸಿಕೊಳ್ಳಬೇಕು. ಮತುಕತೆ ಮೂಲಕ ಬಗೆಹರಿಸಿಕೊಳ್ಳುವುದನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ.
ಭಾರತದ ಕೃಷಿ ಕಾನೂನುಗಳನ್ನು ಅಮೆರಿಕ ಸ್ವಾಗತಿಸುತ್ತದೆ. ಈ ಕಾನೂನುಗಳಿಂದ ಮಾರುಕಟ್ಟೆಯ ದಕ್ಷತೆ ಹೆಚ್ಚಲಿದೆ. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಹೂಡಿಕೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ನವೆಂಬರ್ 26ರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದು, ಭಾರೀ ತಲ್ಲಣವನ್ನೇ ಸೃಷ್ಟಿಸಿದೆ. ಅಲ್ಲದೆ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ರ್ಯಾಲಿ ವೇಳೆ ಕೆಂಪು ಕೋಟೆ ಮೇಲೆ ದಾಳಿ ನಡೆಸಿ, ಸಿಖ್ ಧ್ವಜ ಹಾರಿಸಿರುವ ಕುರಿತು ಸಹ ವ್ಯಾಪಕ ಚರ್ಚೆ ನಡೆಯುತ್ತಿದೆ. ಭಾರತ ರೈತರ ಹೋರಾಟದ ಬಗ್ಗೆ ವಿದೇಶಿ ಸೆಲೆಬ್ರಿಟಿಗಳು ಪ್ರತಿಕ್ರಿಯಿಸುತ್ತಿರುವ ಬೆನ್ನಲ್ಲೇ ಹಲವು ಮಂದಿ ಅಮೆರಿಕ ಸರ್ಕಾರ ಕೃಷಿ ಕಾನೂನುಗಳ ಬಗ್ಗೆ ಪ್ರತಿಕ್ರಿಯಿಸಬೇಕೆಂದು ಆಗ್ರಹಿಸಿದ್ದರು.
ಜನವರಿ 26ರಂದು ನಡೆದ ಪ್ರತಿಭಟನೆ ವೇಳೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಬ್ಯಾರಿಕೇಡ್ಗಳನ್ನು ತಳ್ಳಿ ರೈತರು ದೆಹಲಿಯೊಳಗೆ ನುಗ್ಗಿ ಕೆಂಪು ಕೋಟೆಗೆ ಹಾನಿ ಮಾಡಿ ಸಿಖ್ ಧ್ವಜ ಹಾರಿಸಿದ್ದರು. ಇದಕ್ಕೆ ತೋವ್ರ ಆಕ್ರೋಶ ವ್ಯಕ್ತವಾಗಿತ್ತು. ಜನವರಿ 22ರಂದು ಕೇಂದ್ರ ಸರ್ಕಾರ ಹಾಗೂ ರೈತರೊಂದಿಗೆ ನಡೆದ 11ನೇ ಸುತ್ತಿನ ಮಾತುಕತೆ ವೇಳೆ ಒಂದೂವರೆ ವರ್ಷ ಕಾಲ ಈ ಹೊಸ ಕಾನೂನುಗಳನ್ನು ಜಾರಿಗೆ ತರುವುದಿಲ್ಲ. ಅಲ್ಲದೆ ಕಾನೂನುಗಳ ಕುರಿತು ದೀರ್ಘ ಚರ್ಚೆ ನಡೆಸಲು ಜಂಟಿ ಸಮಿತಿಯನ್ನು ರಚಿಸಲಾಗುವುದು ಎಂದು ಭರವಸೆ ನೀಡಿದೆ. ಆದರೂ ರೈತರು ಪಟ್ಟು ಬಿಡದೆ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.