– ಆಟೋ ಚಾಲಕರು, ಕೆಎಸ್ಆರ್ಟಿಸಿ ನಿಲ್ದಾಣಾಧಿಕಾರಿ ಮಾನವೀಯತೆ
ಬೆಂಗಳೂರು: ಮಹಿಳೆಯೊಬ್ಬರು ಕಳೆದುಕೊಂಡಿದ್ದ 50 ಸಾವಿರ ರೂಪಾಯಿ ಅಧಿಕಾರಿ ಹಾಗೂ ಆಟೋ ಚಾಲಕರ ಸಮಯ ಪ್ರಜ್ಞೆಯಿಂದ ಮತ್ತೆ ಸಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಮ್ಮ ಅತ್ತೆಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಶಶಿಕಲಾ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ನಂತರ ಆಟೋ ಹತ್ತಿ ಅತ್ತೆ ಜೊತೆಗೆ ಸಂಜಯ್ ಗಾಂಧಿ ಆಸ್ಪತ್ರೆ ಬಳಿ ಹೋದ ನಂತರ ತಮ್ಮ ಬಳಿ ಇದ್ದ ಹಣವನ್ನು ಎಂಆರ್ಐ ಸ್ಕ್ಯಾನಿಂಗ್ ರಿಪೋರ್ಟ್ ಜೊತೆಗೆ ಮಿಸ್ ಮಾಡಿಕೊಂಡಿದ್ದಾರೆ.
ನಂತರ ನೇರ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಕರೆತಂದ ಆಟೋ ಚಾಲಕ ಸಿದ್ದರಾಜು, ಸ್ಯಾಟಲೈಟ್ ನಿಲ್ದಾಣಾಧಿಕಾರಿ ಲಕ್ಕೇಗೌಡರ ಬಳಿ ವಿಷಯ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳು ಯಾವ ಬಸ್, ಯಾವ ಡಿಪೋಗೆ ಸೇರಿದ ಬಸ್, ನಿರ್ವಾಹಕರ ನಂಬರ್ ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ಬಳಿಕ ಶಶಿಕಲಾರವರು ಬಂದ ಬಸ್ ರಾಮನಗರದ ಬಳಿ ಸಂಚರಿಸುತ್ತಿದ್ದ ವಿಷಯ ತಿಳಿದುಬಂದಿದೆ. ಎಂಆರ್ಐ ಸ್ಕ್ಯಾನಿಂಗ್ ರಿಪೋರ್ಟ್ ಒಳಗೆ ಹಣ ಇದ್ದಿದ್ದರಿಂದ ಸದ್ಯ ಯಾರ ಗಮನಕ್ಕೂ ಬಂದಿರಲಿಲ್ಲ. ಕೊನೆಗೆ ಆಟೋ ಚಾಲಕ ಸಿದ್ದರಾಜು ಹಾಗೂ ಸ್ಯಾಟಲೈಟ್ ಕೆಎಸ್ಆರ್ಟಿಸಿ ನಿಲ್ದಾಣಾಧಿಕಾರಿ ಲಕ್ಕೇಗೌಡರಿಂದ ಶಶಿಕಲಾ ಅವರಿಗೆ ಹಣ ಮತ್ತೆ ಸಿಕ್ಕಿದೆ.
ಶಶಿಕಲಾ ಅವರು ತಮ್ಮ ಅತ್ತೆಗೆ ಶಸ್ತ್ರಚಿಕಿತ್ಸೆ ಇದ್ದ ಹಿನ್ನೆಲೆಯಲ್ಲಿ ಒಡವೆ ಮಾರಿ ಹಣ ತಂದಿರುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಕಷ್ಟಪಟ್ಟು ದುಡಿದಿದ್ದ ಹಣ ಮತ್ತೆ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರು ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ನಮ್ಮ ಹಣ ಸಿಕ್ಕಿದೆ. ಅವರಿಗೆ ಒಳ್ಳೆದಾಗಲಿ ಎಂದು ಶಶಿಕಲಾ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಬುಕ್ ಬ್ಯಾಂಕ್ ಸ್ಥಾಪನೆಗೆ ಆದೇಶ