– ಮಹಾಪಂಚಾಯತ್ ‘ಪಂಚ’ ನಿರ್ಧಾರಗಳು
ನವದೆಹಲಿ: ರೈತರ ಪ್ರತಿಭಟನೆ 71ನೇ ದಿನಕ್ಕೆ ಕಾಲಿಟ್ಟಿದ್ದು, ಆದ್ರೆ ಇದು ಅಂತ್ಯವಾಗುವ ಯಾವುದೇ ಸಣ್ಣ ಸುಳಿವು ಸಹ ಸಿಗುತ್ತಿಲ್ಲ. ಕೃಷಿ ಕಾನೂನ ಸಂಬಂಧ ರೈತರು ಬುಧವಾರ ಹರಿಯಾಣದ ಜಿಂದ್ ಜಿಲ್ಲೆಯ ಕಂಡೇಲಾ ಗ್ರಾಮದಲ್ಲಿ ಮಹಾಪಂಚಾಯತ್ ಸಭೆ ನಡೆಸಿದರು. ಈ ವೇಳೆ ಮತ್ತೆ ಕೃಷಿ ಮಂತ್ರಿಗಳ ಜೊತೆ ನಾವು ಚರ್ಚೆ ನಡೆಸಲ್ಲ. ಈಗ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು ನಮ್ಮೊಂದಿಗೆ ಮಾತನಾಡಲಿ ಎಂದು ಭಾರತೀಯ ಕಿಸಾನ್ ಯೂನಿಯನ್ ಪ್ರವರ್ತಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಸದ್ಯ ರೈತ ವಿರೋಧಿ ಕಾನೂನುಗಳನ್ನ ಹಿಂಪಡೆಯಬೇಕೆಂದು ಕೇಳುತ್ತಿದ್ದೇವೆ. ಅಧಿಕಾರದ ಕುರ್ಚಿ ಕೇಳಿದ್ರೆ ಸರ್ಕಾರ ಏನು ಮಾಡುತ್ತೆ. ರಾಜನಿಗೆ ಭಯವಾದ್ರೆ ಆತ ತನ್ನ ಕೋಟೆಯ ಬಾಗಿಲುಗಳನ್ನ ಭದ್ರ ಮಾಡಿಕೊಳ್ಳುತ್ತಾನೆ. ಈಗ ಸಹ ಅದೇ ನಡೆಯುತ್ತಿದೆ. ದೆಹಲಿ ಗಡಿಯಲ್ಲಿ ಮೊಳೆ, ಬ್ಯಾರಿಕೇಟ್ ಮುಳ್ಳು ತಂತಿಯ ಬೇಲಿ ಹಾಕಲಾಗಿದೆ. ಶತ್ರುಗಳಿಗೆ ಹೆದರಿಯೂ ಈ ರೀತಿ ಯಾರು ಮಾಡಲಾರರು. ಆದ್ರೆ ರೈತರು ಇದ್ಯಾವುದಕ್ಕೂ ಭಯಬೀಳಲಾರರು ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಕೇಶ್ ಟಿಕಾಯತ್ ಕಿಡಿಕಾರಿದರು.
ಇದೇ ವೇಳೆ ಸರ್ಕಾರದ ಜೊತೆಗೆ ಮಾತುಕತೆ ಆಗಮಿಸುವ ರೈತರ ಕಮೀಟಿಯ ಸದಸ್ಯರ ಸಂಖ್ಯೆ ಇಳಿಕೆಗೂ ಟಿಕಾಯತ್ ವಿರೋಧ ವ್ಯಕ್ತಪಡಿಸಿದರು. ಯುದ್ಧದ ಮಧ್ಯದಲ್ಲಿ ಯಾವಾಗಲೂ ಕುದುರೆಗಳನ್ನ ಬದಲಿಸಲ್ಲ. ಹಾಗಾಗಿ ಕಮೀಟಿಯಲ್ಲಿರುವ ಸದಸ್ಯರೇ ಮುಂದುವರಿಯಲಿದ್ದಾರೆ. ಇದೇ ವೇಳೆ ಮಹಾಪಂಚಾಯತ್ ನಲ್ಲಿ ಐದು ನಿರ್ಣಯಗಳನ್ನ ತೆಗೆದುಕೊಂಡರು.
ಮಹಾಪಂಚಾಯತ್ ‘ಪಂಚ’ ನಿರ್ಧಾರ:
1. ಮೂರು ಕೃಷಿ ಕಾನೂನುಗಳನ್ನ ಸರ್ಕಾರ ಹಿಂಪಡೆದುಕೊಳ್ಳುವುದು.
2. ಎಂಎಸ್ಪಿ ಬಗ್ಗೆ ಕಾನೂನು ರಚನೆ
3. ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ
4. ಬಂಧನದಲ್ಲಿರುವ ರೈತರ ಬಿಡುಗಡೆ ಮತ್ತು ವಶಕ್ಕೆ ಪಡೆದ ಟ್ರ್ಯಾಕ್ಟರ್ ಹಸ್ತಾಂತರಿಸುವುದು.
5. ರೈತರ ಸಾಲಮನ್ನಾ