ಬೆಂಗಳೂರು: ಅರಣ್ಯ ಸಚಿವ ಆನಂದ್ ಸಿಂಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ.
ಇಂದು ಮಧ್ಯಾಹ್ನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ಅರ್ಧಕ್ಕೆ ಮೊಟಕುಗೊಳಿಸುವ ಸಂಬಂಧ ವಿಧಾನಸೌಧದಲ್ಲಿ ಕಲಾಪ ಸಲಹಾ ಸಮಿತಿ ಸಭೆಯನ್ನು ಕರೆದಿದ್ದರು. ಈ ಸಭೆಗೆ ಸಿದ್ದರಾಮಯ್ಯನವರು ತೆರಳುತ್ತಿದ್ದಾಗ ಕಾಲು ಮುಟ್ಟಿ ಆನಂದ್ ಸಿಂಗ್ ನಮಸ್ಕಾರ ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಆನಂದ್ ಸಿಂಗ್ ಬೆನ್ನು ತಟ್ಟಿ ಹೇಗಿದ್ಯಪ್ಪ ಎಂದು ಕೇಳಿ ತೆರಳಿದರು.
ಡಿಸೆಂಬರ್ 15ವರೆಗೂ ಚಳಿಗಾಲದ ಅಧಿವೇಶನ ನಡೆಯಬೇಕಿತ್ತು. ಆದರೆ ಶಾಸಕರು ಅಧಿವೇಶನಕ್ಕೆ ಬರಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರು ಚಕ್ಕರ್ ಹಾಕುತ್ತಿದ್ದಾರೆ.
ಶಾಸಕರು ಅಧಿವೇಶನಕ್ಕೆ ಬರಲು ನಿರಾಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರದವರೆಗೆ ಮಾತ್ರ ಅಧಿವೇಶನ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಜೆ ಸಿ ಮಾಧುಸ್ವಾಮಿ, ಸುರೇಶ್ ಕುಮಾರ್, ಈಶ್ವರಪ್ಪ, ಜೆಡಿಎಸ್ ಶಾಸಕರಾದ ಎಚ್ ಕೆ ಕುಮಾರಸ್ವಾಮಿ, ಎಚ್ಡಿ ರೇವಣ್ಣ ಸೇರಿ ಹಲವು ಮಂದಿ ಭಾಗಿಯಾಗಿದ್ದರು.