ಮುಂಬೈ: ಮಹಾರಾಷ್ಟ್ರ ಚುನಾವಣಾ ಆಯೋಗದ ಮಾಜಿ ಆಯುಕ್ತೆ ಹಾಗೂ ಮರಾಠಿ ಲೇಖಕಿ ನೀಲ ಸತ್ಯನಾರಾಯಣ್ ಅವರು ಇಂದು ಕೋವಿಡ್ 19ಗೆ ಬಲಿಯಾಗಿದ್ದಾರೆ.
ಸತ್ಯನಾರಾಯಣ್ ಅವರು ರಾಜ್ಯ ಚುನಾವಣಾ ಆಯೋಗದ ಮೊದಲ ಮಹಿಳಾ ಆಯುಕ್ತೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಇವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಅಂಧೇರಿಯ ಮರೊಲ್ ನಲ್ಲಿರುವ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸತ್ಯನಾರಾಯಣ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯರಿಯವರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ನಾವು ಇಂದು ಒಳ್ಳೆಯ ಅಧಿಕಾರಿಯನ್ನು ಹಾಗೂ ಸಾಮಾಜಿಕವಾಗಿ ಅತಿ ಬೇಗನೆ ಸ್ಪಂದಿಸುವ ಮಹಾನ್ ಚಿಂತಕರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಸತ್ಯನಾರಾಯಣ್ ಅವರು ಒಬ್ಬ ಅತ್ಯುತ್ತಮ ಅಧಿಕಾರಿ, ಸಮೃದ್ಧ ಬರಹಗಾರ್ತಿ, ಧೈರ್ಯವಂತ ತಾಯಿ ಹಾಗೂ ಸಾಮಾಜಿಕ ಕಳಕಳಿಯಿರುವ ಮಹಿಳೆಯಾಗಿದ್ದರು. ಅವರು ತಮ್ಮ ಜೀವನ ಹಾಗೂ ವೃತ್ತಿಯ ಪ್ರತಿಯೊಂದು ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದವರಾಗಿದ್ದಾರೆ. ಇಂದು ಅವರ ನಿಧನ ನಮಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ರಾಜ್ಯಪಾಲರು ಹೇಳಿದ್ದಾರೆ.