ಮುಂಬೈ: ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವ್ಹಾದ್ ನಂತರ ಮತ್ತೊಬ್ಬ ಸಚಿವರಿಗೆ ಕೊರೊನಾ ಸೋಂಕು ತಗುಲಿದ್ದು, ಕಾಂಗ್ರೆಸ್ ನಾಯಕ ಹಾಗೂ ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕ್ಯಾಬಿನೆಟ್ನ ಇಬ್ಬರು ಸಚಿವರಿಗೆ ಕೊರೊನಾ ಸೋಂಕು ತಗುಲಿದಂತಾಗಿದ್ದು, ಈ ಹಿಂದೆ ವಸತಿ ಸಚಿವ ಜಿತೇಂದ್ರ ಅವ್ಹಾದ್ ಅವರಿಗೆ ಸೋಂಕು ತಗುಲಿತ್ತು ನಂತರ ಅವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಇದೀಗ ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ಅವರಿಗೂ ಸೋಂಕು ತಗುಲಿದೆ. ಅಶೋಕ್ ಅವರನ್ನು ನಾಂದೇಡ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರು ಮುಂಬೈ ಹಾಗೂ ಅವರ ಜಿಲ್ಲೆ ಮಾರಥ್ವಾಡಕ್ಕೆ ಪದೇ ಪದೇ ಸಂಚರಿಸಿದ್ದಾರೆ. ಈ ವೇಳೆ ಅವರು ಸೋಂಕಿತನನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳಿಂದ ಅಶೋಕ್ ಚವಾಣ್ ಅವರು ಹೋಮ್ ಕ್ವಾರಂಟೈನ್ನಲ್ಲಿದ್ದರು. ಅಲ್ಲದೆ ಈ ತಿಂಗಳ ಆರಂಭದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ನಂತರ ಚೇತರಿಸಿಕೊಂಡಿದ್ದರು. ಇದೀಗ ಮತ್ತೆ ಅನಾರೋಗ್ಯಕ್ಕೊಳಗಾಗಿದ್ದರಿಂದ ಪರೀಕ್ಷೆಗೆ ಒಳಗಾಗಿದ್ದಾರೆ. ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಹಿಂದೆ ಎನ್ಸಿಪಿ ನಾಯಕ ಹಾಗೂ ಸಚಿವ ಜಿತೇಂದ್ರ ಆವ್ಹಾದ್ ಅವರಿಗೆ ಪಾಸಿಟಿವ್ ಕಾಣಿಸಿಕೊಂಡ ನಂತರ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ವಾರಗಳ ಕಾಲ ಚಿಕಿತ್ಸೆ ಪಡೆದು ನಂತರ ಡಿಸ್ಚಾರ್ಜ್ ಆಗಿದ್ದರು.