ಚಾಮರಾಜನಗರ: ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ 60 ಲಕ್ಷ ರೂ.ಹಣ ನೀಡಲಾಗಿದೆ.
ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಸಿಎಂ ಯಡಿಯೂರಪ್ಪಗೆ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಇಂದು ಚೆಕ್ ಹಸ್ತಾಂತರಿಸಿದರು. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ 50 ಲಕ್ಷ ರೂ. ಹಾಗೂ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಯ 3 ದಿನದ ವೇತನ ಹಣ 10 ಲಕ್ಷ ರೂ.ಸೇರಿ ಒಟ್ಟು 60 ಲಕ್ಷ ರೂ.ಗಳನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗಿದೆ.
ನೌಕಕರು ಸ್ವಯಂ ಪ್ರೇರಣೆಯಿಂದ 3 ದಿನದ ವೇತನವನ್ನು ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿವೃತ್ತ ಅಧಿಕಾರಿಗಳು, ನೌಕರರು ತಮ್ಮ ಒಂದು ದಿನದ ಪಿಂಚಣಿ ಹಣ ಹಾಗೂ ನೌಕರರು, ಅಧಿಕಾರಿಗಳ ಒಂದು ದಿನದ ವೇತನವನ್ನು ಕೋವಿಡ್-19 ನಿಧಿಗೆ ನೀಡಿದ್ದಾರೆ. ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ 60 ಲಕ್ಷ ರೂ. ಖಾದಿ ಮತ್ತು ಗ್ರಾಮೋದ್ಯೋಗದ 4.08 ಲಕ್ಷ ರೂ.ಗಳ ಚೆಕ್ನ್ನು ಸಿಎಂ ಯಡಿಯೂರಪ್ಪನವರಿಗೆ ನೀಡಿರುವುದಾಗಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.