– ಕಲ್ಲು ತೂರಾಟ, 12ಕ್ಕೂ ಅಧಿಕ ಜನರಿಗೆ ಗಾಯ
– ಕೇಸರಿ ಧ್ವಜಗಳ ಮಧ್ಯೆ ಚೆಲ್ಲಿದ ನೆತ್ತರು
ಭೋಪಾಲ್: ಇಂದೋರ್ ಜಿಲ್ಲೆಯ ಗೌತಮಪುರದ ಚಾಂದನ್ಖೇಡಿ ಗ್ರಾಮದಲ್ಲಿ ಹಿಂದೂ ಸಂಘಟನೆಯ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದ್ದಿ, 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕಾಗಿ ದೇಣಿಗೆ ಪಡೆಯಲು ಹಿಂದೂ ಸಂಘಟನೆ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಮೆರವಣಿಗೆ ನಡೆಸಿದ್ದರು.
ಮೆರವಣಿಗೆ ಮಾರ್ಗ ಮಧ್ಯೆ ಗ್ರಾಮದ ಮಸೀದಿ ಮುಂದೆ ಜಮಾವಣೆಗೊಂಡಿದ್ದ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಣೆ ಮಾಡಲು ಆರಂಭಿಸಿದರು. ಮಸೀದಿ ಮುಂದೆ ಮಂತ್ರ ಪಠಣೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡು ಸಮುದಾಯದ ಜನ ಒಂದೆಡೆ ಸೇರಿದ್ದರಿಂದ ಕಲ್ಲು ತೂರಾಟ ನಡೆದಿದೆ.
ಗ್ರಾಮದಲ್ಲಿ ಘರ್ಷಣೆಯ ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಗ್ರಾಮಕ್ಕೆ ತಹಶೀಲ್ದಾರ, ಜಿಲ್ಲಾಧಿಕಾರಿಗಳು ಸಹ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನ ನಿಯೋಜಿಸಲಾಗಿದೆ. ಕಲ್ಲು ತೂರಾಟ ನಡೆಸಿದ ಎಂಟು ಜನರನ್ನ ಪೊಲೀಸರು ಗುರುತಿಸಿದ್ದಾರೆ. ಆದ್ರೆ ಇದುವರೆಗೂ ಯಾರ ಬಂಧನವಾಗಿಲ್ಲ.
ಡಿಸೆಂಬರ್ 25ರಂದು ಉಜ್ಜೈನ್ ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಪಡೆಯಲು ಹೊರಟ್ಟಿದ್ದ ಕಾರ್ಯಕರ್ತರು ಮಸೀದಿ ಮುಂದೆ ಹನುಮಾನ್ ಚಾಲೀಸ ಪಠಣೆ ಮಾಡಿದ್ದರಿಂದ ಗಲಾಟೆ ನಡೆದಿತ್ತು.