– ಭಾರೀ ಪ್ರಮಾಣದ ಅಲೆಗಳ ಹೊಡೆತಕ್ಕೆ ಜನ ತತ್ತರ
ಕಾರವಾರ: ಕರಾವಳಿಯಲ್ಲಿ ಮಳೆ ಅಬ್ಬರ ಕಡಿಮೆಯಾದರೂ ರಕ್ಕಸ ಅಲೆಗಳ ಹೊಡೆತಕ್ಕೆ ಕರಾವಳಿ ತೀರದ ಜನ ತತ್ತರಿಸಿದ್ದು, ಭಯಭೀತರಾಗಿದ್ದಾರೆ.
ಕಡಲ ಅಬ್ಬರಕ್ಕೆ ಕಡಲ ತೀರ ಪ್ರದೇಶ ಭಾಗದ ರಾಜ್ಯದ ಪ್ರಸಿದ್ಧ ಇಕೋ ಬೀಚ್ ನ ಹಲವು ಭಾಗಗಳಿಗೆ ಹಾನಿಯಾಗಿದ್ದು, ಸಮುದ್ರದ ಅಲೆಗಳಿಗೆ ಮರಗಿಡಗಳು ಕೊಚ್ಚಿಹೋಗುತ್ತಿವೆ. ಕಾರವಾರ, ಹೊನ್ನಾವರದ ಕಡಲತೀರದಲ್ಲಿ ಕಡಲಕೊರತದಿಂದಾಗಿ ಭಾರೀ ಹಾನಿ ಸಂಭವಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಕಡಲ ಅಬ್ಬರದಿಂದಾಗಿ ಕಡಲ ಕೊರೆತ ಹೆಚ್ಚಾಗಿದ್ದು, ಜಿಲ್ಲೆಯ ಕಾರವಾರ, ಭಟ್ಕಳ, ಹೊನ್ನಾವರ ಭಾಗದ ಕಡಲ ತೀರ ಪ್ರದೇಶದಲ್ಲಿ ಗಜ ಗಾತ್ರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿವೆ. ಈ ಭಾಗದ ಪ್ರದೇಶಗಳಲ್ಲಿ ಕಡಲ ಕೊರೆತ ಪ್ರಾರಂಭವಾಗಿದ್ದು, ರಾಜ್ಯದ ಪ್ರಸಿದ್ಧ ಇಕೋ ಬೀಚ್ ಸೇರಿದಂತೆ ಹಲವು ಭಾಗಗಳಿಗೆ ಹಾನಿಯಾಗಿದೆ.
ಸುಮಾರು 4-5 ಅಡಿಯ ಅಲೆಗಳು ಸಮುದ್ರದ ದಂಡೆಗೆ ಬಂದು ಹೊಡೆಯುತ್ತಿವೆ. ಇದರಿಂದಾಗಿ ದಡದಲ್ಲಿರುವ ಬೀಚ್ನ ಹಟ್ಗಳಿಗೆ ಹಾನಿಯಾಗಿದ್ದು, ಭೂ ಭಾಗ ಕೊಚ್ಚಿ ಹೋಗುತ್ತಿದೆ. ಇದರಿಂದಾಗಿ ಸ್ಥಳೀಯ ಜನರಲ್ಲಿ ಭಾರೀ ಆತಂಕ ಮನೆ ಮಾಡಿದೆ.