ಚಾಮರಾಜನಗರ: ಮಹಿಳೆಯೊಬ್ಬರು ಮಳೆಯಲ್ಲೇ ನೆನೆಯುತ್ತಾ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕತ್ತಲಾದರೂ ಮಳೆಯಲ್ಲೇ ನೆನಯುತ್ತಾ ಧರಣಿ ನಡೆಸಿದರೂ ಪೊಲೀಸರು ಕ್ಯಾರೇ ಎನ್ನದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಬಂದಿದೆ. ಚಾಮರಾಜನಗರ ತಾಲೂಕಿನ ಚಂದಕವಾಡಿ ಹೆಚ್.ಡಿ ಫಾರೆಸ್ಟ್ ಸರ್ವೆ ನಂಬರ್ 1/168ರಲ್ಲಿ ಸುಶೀಲ- ಶಿವಣ್ಣ ದಂಪತಿಯ ಜಮೀನಿದ್ದು, ಪಕ್ಕದ ಜಮೀನಿನ ಮಾಲೀಕ ದೊರೆಸ್ವಾಮಿ ಎಂಬಾತ ಅತಿಕ್ರಮಣ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿ ದಾಖಲೆಗಳು ತಮ್ಮಂತೆಯೇ ಇರುವುದು ದೃಢಪಟ್ಟಿದೆ. ಈಗ ವ್ಯವಸಾಯ ಮಾಡಲು ಹೋದರೆ ಆತ ತೊಂದರೆ ಕೊಡುತ್ತಿದ್ದಾನೆ. ತಮಗೆ ಪೊಲೀಸ್ ರಕ್ಷಣೆ ಬೇಕು ಎಂದು ಸುಶೀಲ ಅವರು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು. ಪೊಲೀಸ್ ನಿಯೋಜಿಸಿಕೊಡಲು ಸೇವಾ ಶುಲ್ಕವನ್ನು ಪಾವತಿಸಿದ್ದರು.
ಅಷ್ಟೆಲ್ಲ ಮಾಡಿದರೂ ತಮಗೆ ಯಾವುದೇ ರಕ್ಷಣೆ ನೀಡದ ಹಿನ್ನೆಲೆಯಲ್ಲಿ ಸುಶೀಲ ಅವರು ಜೂನ್ 10ರಂದು ಇಡೀ ದಿನ ಠಾಣೆಯ ಮುಂದೆ ಮಳೆಯಲ್ಲೇ ನೆನೆಯುತ್ತಾ ಧರಣಿ ನಡೆಸಿದ್ದಾರೆ. ಮಹಿಳೆ ಧರಣಿ ಕಳಿತರೂ ಪೊಲೀಸ್ ಅಧಿಕಾರಿಗಳು ಕ್ಯಾರೇ ಎನ್ನದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.