– ಕೊರೊನಾ ವಾರಿಯರ್ಸ್ಗೆ ಸದ್ಯಕ್ಕೆ ಸನ್ಮಾನ ಬೇಡ
ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ವಿಪರೀತವಾಗಿ ಸುರಿಯುತ್ತಿದೆ. ಮಳೆಗಾಲದಲ್ಲಿ ಶೀತ, ನೆಗಡಿ, ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಜನತೆ ಯಾರೂ ಮಾಮೂಲಿ ಶೀತ ಜ್ವರ ಎಂದು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಕಿವಿಮಾತು ಹೇಳಿದ್ದಾರೆ.
ಶೀತ ಜ್ವರದ ಲಕ್ಷಣ ಕಂಡು ಬಂದಾಗ ಹತ್ತಿರದ ಫೀವರ್ ಕ್ಲಿನಿಕ್ಗೆ ಭೇಟಿ ಕೊಡಬೇಕು. ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆರೋಗ್ಯದಲ್ಲಿ ಬದಲಾವಣೆಯಾದರೆ ಎಲ್ಲ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದರು.
ಕೊರೊನಾ ವಿಚಾರದಲ್ಲಿ ಯಾರಿಗೂ ಆತಂಕ, ಭಯ ಬೇಡ. ಜಿಲ್ಲಾಡಳಿತ ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಕೊಡಿಸುತ್ತಿದೆ ಎಂದು ಜಿ.ಜಗದೀಶ್ ಜನರಿಗೆ ಭರವಸೆ ನೀಡಿದರು.
ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮಗಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿದೆ. ಸನ್ಮಾನದ ಹೆಸರಿನಲ್ಲಿ ಆಯೋಜಕರು ಸಾಮಾಜಿಕ ಅಂತರ, ಮತ್ತಿತರ ಸರ್ಕಾರದ ನಿರ್ದೇಶನಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಯಾವುದೇ ಕಾರ್ಯಕ್ರಮಗಳು ಬೇಡ. ಕೊರೊನಾ ಹತೋಟಿಗೆ ಬಂದ ನಂತರ ಸಂಭ್ರಮಿಸಲು ಸಾಕಷ್ಟು ಕಾಲಾವಕಾಶ ಇದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.