ಚಾಮರಾಜನಗರ: ಬಿಗ್ಬಾಸ್ ವಿಜೇತ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಈ ಬಾರಿ ಅವರು ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಘಟನೆಯೇನು..?
ಗಣೇಶ ಹಬ್ಬಕ್ಕೆ ‘ಕೋಲು ಮಂಡೆ ಜಂಗಮ ದೇವರು’ ಎಂಬ ಹೊಸ ರ್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ.
ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮಲೆ ಮಹದೇಶ್ವರ ಸ್ವಾಮಿ ಗ್ರೂಪ್ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಕಿಡಿಕಾರಿದ್ದಾರೆ. ಹಾಡು ವೈರಲ್ ಆದ್ರೂ, ಚಾಮರಾಜನಗರದಲ್ಲಿ ಈ ಹಾಡಿಗೆ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಯುವ ದಸರಾ ವೇದಿಕೆಯಲ್ಲಿ ಎಂಗೇಜ್ಮೆಂಟ್ ಆಗಿ ಚಂದನ್ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈಗಾಗಲೇ ಯುವ ದಸರಾ ವೇದಿಕೆಯಿಂದ ಚಂದನ್ ಬ್ಯಾನ್ ಆಗಿದ್ದಾರೆ. ಇದೀಗ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಆಗಸ್ಟ್ 23 ರಂದು ಈ ವಿಡಿಯೋ ಬಿಡುಗಡೆಯಾಗಿದ್ದು, ಈಗಾಗಲೇ 35 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಯೂ ಟ್ಯೂಬ್ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ.