– ಮರಾಠಿ ಮಾತನಾಡಿದ ತಕ್ಷಣ ಅವರು ನಮಗೆ ವೈರಿಗಳಾಗುವುದಿಲ್ಲ
ಕೋಲಾರ: ಸಿಎಂ ಯಡಿಯೂರಪ್ಪ ಅವರು ಮರಾಠರ ಅಭಿವೃದ್ಧಿ ನಿಗಮ ಮಾಡಿರುವುದು ತಪ್ಪಿಲ್ಲ ಎಂದು ಕೋಲಾರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟಿಲ್ ಹೇಳಿದ್ದಾರೆ.
ಕೋಲಾರದ ಕೃಷಿ ಇಲಾಖೆ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ ವೇಳೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿಯೇ ಹುಟ್ಟಿ ಬೆಳೆದಿರುವ ಎಲ್ಲಾ ಜನಾಂಗದವರು ಇದ್ದಾರೆ. ಹೀಗಾಗಿ ಮರಾಠಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಸಿಎಂ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕುವೆಂಪು ಅವರು ಹೇಳಿದ ಹಾಗೆ ಸರ್ವಜನಾಂಗದ ಬೀಡು ಕರ್ನಾಟಕವಾಗಿದ್ದು, ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ವಿಚಾರವಾಗಿ ತಪ್ಪು ಗ್ರಹಿಕೆ ಬೇಡ. ಅಲ್ಲದೆ ಮರಾಠಿಗರಲ್ಲಿಯೂ ಸಹ ಕಡುಬಡವರಿದ್ದು, ಅವರು ಸಹ ಬದುಕಬೇಕು. ಮರಾಠಿ ಮಾತನಾಡಿದ ತಕ್ಷಣ ಅವರು ನಮಗೆ ವೈರಿಗಳಾಗುವುದಿಲ್ಲ. ಅವರು ನಮ್ಮ ಜೊತೆಯಲ್ಲಿಯೇ ಇರುವಂತಹವರು, ನಮ್ಮಲ್ಲೇ ಹುಟ್ಟಿರುವಂತಹವರು, ಇದರಿಂದ ಅವರನ್ನು ಕಡೆಗಣಿಸಲು ಆಗುವುದಿಲ್ಲ ಎಂದು ಹೇಳಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರದಲ್ಲೂ ತಪ್ಪು ಗ್ರಹಿಕೆ ಮಾಡುವುದು ಬೇಡ, ಎಲ್ಲರನ್ನೂ ಸಮಾನವಾಗಿ ನೋಡಬೇಕೆಂದು ಬಸವಣ್ಣನವರು ಹೇಳಿದ್ದು, ಅವರ ದೊಡ್ಡತನವಾಗಿದೆ. ಅಲ್ಲದೆ ವೀರಶೈವ ಲಿಂಗಾಯತರಲ್ಲಿಯೂ ಬಿಕ್ಷೆ ಬೇಡುವಂತಹವರು ಇದ್ದಾರೆ. ಕೂಲಿ ಕಾರ್ಮಿಕರು ಇದ್ದಾರೆ. ಎಲ್ಲದರಲ್ಲೂ ಮುಂದುವರೆದವರು ಇಲ್ಲ. ಹೀಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಿಂದಿನಿಂದಲೂ ಬೇಡಿಕೆ ಇತ್ತು. ಹೀಗಾಗಿ ನಿಗಮ ಸ್ಥಾಪನೆ ಮಾಡಿರುವುದಕ್ಕೆ ಸಿಎಂ ಅವರಿಗೆ ಅಭಿನಂದೆನೆಗಳು ಎಂದರು.