ತುಮಕೂರು: ಮನ ಬಂದಂತೆ ಕೊರೊನಾ ಚಿಕಿತ್ಸೆ ನೀಡುವಂತಿಲ್ಲ ಎಂದು ಖಾಸಗಿ ಕ್ಲಿನಿಕ್, ಮೆಡಿಕಲ್ ಶಾಪ್ಗಳಿಗೆ ಉಸ್ತುವಾರಿ ಸಚಿವ ಮಾಧುಸ್ವಾಮಿ ಖಡಕ್ ಎಚ್ವರಿಕೆಯನ್ನು ನೀಡಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ತೀನಂಶ್ರೀ ಸಭಾಭವನದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಭೆ ಸೇರಿದ್ದರು. ಈ ವೇಳೆ ತಾಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಲ್ಯಾಬ್ ಟೆಕ್ನಿಷಿಯನ್ ಮತ್ತು ಔಷಧಿ ವ್ಯಾಪಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಖಾಸಗಿ ಕ್ಲಿನಿಕ್ಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಚಿಕಿತ್ಸೆ ನೀಡುವುದು ಹಾಗೂ ಔಷಧಿ ವ್ಯಾಪಾರಿಗಳು ವೈದ್ಯರ ಸಲಹಾ ಚೀಟಿಗಳಿಲ್ಲದೆ ಔಷಧಿಗಳನ್ನು ನೀಡುವುದು ಮಾಡಿದರೆ ಅಂತಹವರನ್ನು ನಾನು ಸಹಿಸುವುದಿಲ್ಲ ಅಂತಹ ಯಾವುದೇ ಕ್ಲಿನಿಕ್, ಔಷಧಿ ಅಂಗಡಿಗಳನ್ನು ಮುಲಾಜಿಲ್ಲದೆ ಬೀಗ ಹಾಕಿಸುವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ
ಸಾರ್ವಜನಿಕ ಕ್ಲಿನಿಕ್ಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಿ ಹೋದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾವುದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಕೊಡಬಾರದು ಎಂದು ಹೇಳಿಲ್ಲ. ಕೊರೊನಾ ಲಕ್ಷಣಗಳು ಇರುವಂತಹವರಿಗೆ ತಕ್ಷಣ ದೊರೆಯುವ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಒಳಪಡಿಸಿ ಕೊರೊನಾ ಚಿಕಿತ್ಸೆ ನೀಡಬೇಕು. ಬೇಕಾಬಿಟ್ಟಿ ಚಿಕಿತ್ಸೆ ನೀಡಿ ಸಾವಿಗೆ ಕಾರಣರಾಗಬಾರದು ಎಂದು ತಾಕೀತು ಮಾಡಿದರು. ಇದನ್ನೂ ಓದಿ: ಸಚಿವ ಮಾಧುಸ್ವಾಮಿ ಸ್ವಕ್ಷೇತ್ರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ
ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಸಾಮಾಜಿಕ ಅಂತರವಿರುವುದಿಲ್ಲ. ಎಲ್ಲರನ್ನು ಒಂದೇ ಕಡೆ ಕೂರಿಸುವುದು ಹಾಗೂ ಒಂದೇಕಡೆ ಮಲಗಿಸುವುದು ಇದರಿಂದ ರೋಗ ಉಲ್ಬಣವಾಗುತ್ತಿದೆ. ಶಿರಾದಲ್ಲಿ ವೈದ್ಯರುಗಳು ಹಣಗಳಿಸುವುದಕ್ಕಾಗಿ ಆರ್ಟಿಪಿಸಿಆರ್ ನೆಗೆಟಿವ್ ಬಂದಿದ್ದರೂ ಅಂತಹ ರೋಗಿಗಳಿಗೆ ಸಿಟಿ ಸ್ಕ್ಯಾನ್ ಮಾಡಿಸುತ್ತಿದ್ದಾರೆ. ಇಂತಹ ಬೆಳವಣಿಗೆ ನಿಲ್ಲಬೇಕು ಎಂದು ವಾರ್ನಿಂಗ್ ಮಾಡಿದ್ದಾರೆ.
ರೋಗಿಗಳು ಖಾಸಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವ ಅವರು ವೆಂಟಿಲೇಟರ್ಗೆ ಹೋಗಿದ್ದಾರೆ. ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕೇವಲ ಹತ್ತು ನಿಮಿಷದಲ್ಲಿ ಫಲಿತಾಂಶ ತಿಳಿಯುತ್ತದೆ ಅಂತ ವ್ಯಕ್ತಿಗಳಿಗೆ ನೆಗೆಟಿವ್ ಬಂದರೆ ಅಂತಹವರನ್ನು ಆರ್ಟಿಪಿಸಿಗೆ ಒಳಪಡಿಸಿ ಎಂದಿದ್ದಾರೆ.
ಜನತೆ ಕೂಡ ಮೂರ್ಖರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಹೋದರೆ ಕೊರೊನಾ ಟೆಸ್ಟ್ ಮಾಡುತ್ತಾರೆ ಎಂದು ಬರೋದಿಲ್ಲ. ಆಸ್ಪತ್ರೆಗೂ ಹೋಗೋದಿಲ್ಲ ಅಂತಹವರು ಮೆಡಿಕಲ್ ಸ್ಟೋರ್ಗಳಿಗೆ ಹೋಗಿ ಔಷಧಿ ಪಡೆಯುತ್ತಾರೆ. ಇದರಿಂದ ರೋಗ ಉಲ್ಬಣವಾಗಿ ಆಕ್ಸಿಜನ್ ಕೊರತೆ ಉಂಟಾದಾಗ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ ಇದರಿಂದ ಉಳಿಸಲು ಕಷ್ಟವಾಗುತ್ತದೆ. ಇಂತಹ ಬೆಳವಣಿಗೆಯನ್ನು ನಾನು ಸಹಿಸುವುದಿಲ್ಲ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.