– ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ
ಬೆಂಗಳೂರು: ಇತ್ತೀಚೆಗಷ್ಟೇ ಕೇರಳದಲ್ಲಿ ಆನೆಗೆ ಅನಾನಸಿನಲ್ಲಿ ಸ್ಫೋಟಕ ಇಟ್ಟು ಕೊಂದ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಇದೀಗ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ನಾಯಿ ಮರಿಗೆ ಹಿಗ್ಗಾಮುಗ್ಗ ಥಳಿಸಿ ಕ್ರೌರ್ಯತೆ ಪ್ರದರ್ಶಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಕುಮಾರಸ್ವಾಮಿ ಲೇಔಟಿನಲ್ಲಿ ನಡೆದಿದ್ದು, ಆರೋಪಿಯನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ. ಆರೋಪಿ 50 ಲಕ್ಷ ದಂಡ ಕಟ್ಟಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾನೆ.
ಸೋಮಶೇಖರ್ ಹೊರ ಬರುತ್ತಿದ್ದಂತೆಯೇ ಮೂರು ನಾಯಿಮರಿಗಳು ಆತನ ಮನೆಯ ಹೊರಗಡೆ ಮಲವಿಸರ್ಜನೆ ಮಾಡಿದ್ದವು. ಇದನ್ನು ಗಮನಿಸಿದ ಸೋಮಶೇಖರ್ ಮರದ ಕೋಲಿನಿಂದ ನಾಯಿ ಮರಿಗಳಿಗೆ ಹಿಗ್ಗಾಮುಗ್ಗ ಥಳಿಸುವ ಮೂಲಕ ಅಲ್ಲಿಂದ ಓಡಿಸಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಎರಡು ಮರಿಗಳು ಹೇಗೂ ತಪ್ಪಿಸಿಕೊಂಡು ಓಡಿ ಹೋದವು. ಆದರೆ ಒಂದು ಮಾತ್ರ ಥಳಿತಕ್ಕೊಳಗಾಗಿ ಕಾಲುನೋವಿನಿಂದ ಅಲ್ಲೇ ಅರಚುತ್ತಾ ಕುಳಿತಿತ್ತು.
ಸೋಮಶೇಖರ್ ನೀಚ ಕೃತ್ಯವನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಬಂದು 5 ತಿಂಗಳ ನಾಯಿ ಮರಿಯನ್ನು ರಕ್ಷಿಸಿದ್ದಾರೆ. ಅಲ್ಲದೆ ನಾಯಿ ಮರಿಯನ್ನು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಬಳಿಕ ನಾವು ನಾಯಿ ಮರಿಯೊಂದನ್ನು ರಕ್ಷಣೆ ಮಾಡಿದ್ದೇವೆ ಅಂತ ಪ್ರಾಣಿ ದಯಾ ಸಂಘದವರಿಗೆ ವಿಚಾರ ಮುಟ್ಟಿಸಿದ್ದಾರೆ ನಾಯಿ ಮರಿಯ ಸ್ಥಿತಿ ಚಿಂತಾಜನಕವಾಗಿದ್ದು, ಅದರ ಮೂಗು ಊದಿಕೊಂಡಿದೆ ಎಂದು ಸಂಘದ ಕಾರ್ಯಕರ್ತ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಆಕಸ್ಮಿಕವಾಗಿ ಗರ್ಭಿಣಿ ಆನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿರಬಹುದು- ಪರಿಸರ ಸಚಿವಾಲಯ
ಸದ್ಯ ನಾಯಿ ಮರಪಿಗೆ ಜೀವಾ ಪೆಟ್ ಕ್ಲಿನಕ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದರ ಕಾಲು ಮತ್ತು ಹಿಂಬದಿಗೆ ಗಂಭೀರ ಗಾಯಗಳಾಗಿದೆ. ಆರೋಪಿ ವಿರುದ್ಧ ಅನಿಮಲ್ ಆ್ಯಕ್ಟ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, 50 ಲಕ್ಷ ದಂಡ ವಿಧಿಸಿ ಜಾಮೀನು ನೀಡಲಾಗಿದೆ. ಇದನ್ನೂ ಓದಿ: ನದಿಗೆ ಹಾರಿದ ಯಜಮಾನನಿಗಾಗಿ 4 ದಿನಗಳಿಂದ ಸೇತುವೆ ಮೇಲೆ ಕಾಯುತ್ತಿದೆ ಶ್ವಾನ