– ನೀರಿನ ದಾಹ ತೀರಿಸಿಕೊಳ್ಳಲು ಕಾಡಾನೆಗಳು ಗ್ರಾಮಕ್ಕೆ ಎಂಟ್ರಿ
ಹಾಸನ: ಎರಡು ಕಾಡಾನೆಗಳು ಬಾಯಾರಿಕೆಯನ್ನು ನೀಗಿಸಿಕೊಳ್ಳಲು ನೀರನ್ನು ಅರಸಿ ಗ್ರಾಮದೊಳಗೆ ಎಂಟ್ರಿಕೊಟ್ಟಿದ್ದು, ಕಾಫಿ ಎಸ್ಟೇಟ್ ಬಳಿಯ ಮನೆಯ ಸಮೀಪದ ಟ್ಯಾಂಕ್ನಿಂದ ನೀರು ಕುಡಿದು ದಾಹ ತೀರಿಸಿಕೊಂಡಿವೆ.
ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ದೇವಿ ಎಸ್ಟೇಟ್ ನಲ್ಲಿರುವ ಕುಮಾರ್ ಅವರ ಮನೆಯ ಆವರಣಕ್ಕೆ ಕಾಡಾನೆಗಳು ಬಂದಿವೆ. ನಂತರ ಮನೆಯ ಸುತ್ತ ಸಾಗಿದ ಆನೆಗಳು, ಮನೆಯ ಹಿಂಭಾಗವಿರುವ ಸಿಮೆಂಟ್ ತೊಟ್ಟಿಯ ಬಳಿ ಬಂದು ನೀರು ಕುಡಿದು ಬಾಯಾರಿಸಿಕೊಂಡಿವೆ. ನೀರು ಕುಡಿದ ನಂತರ ಕಾಫಿ ತೋಟದೊಳಗೆ ಆನೆಗಳು ಸಾಗಿವೆ.
ಕಾಡಾನೆ ಕಂಡು ಹೆದರಿ ಯುವತಿ ಮನೆಯೊಳಗೆ ಓಡಿದ್ದು, ಬಾಗಿಲು ಹಾಕಿಕೊಂಡಿದ್ದಾರೆ. ನಂತರ ಆನೆ ನೀರು ಕುಡಿಯುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆನೆ ಮನೆಯ ಸಮೀಪ ಬಂದು ನಿರ್ಭೀತಿಯಿಂದ ನೀರು ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಭಾಗದಲ್ಲಿ ಕಾಡಾನೆಗಳ ದಾಳಿ ವಿಪರೀತವಾಗಿದ್ದು, ಹಲವರನ್ನು ತುಳಿದು ಸಾಯಿಸಿವೆ. ಹೀಗಾಗಿ ಆದಷ್ಟು ಬೇಗ ಕಾಡಾನೆಗಳು ಜಮೀನಿಗೆ ಬರದಂತೆ ತಡೆಯಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.