– ಓಡಿದ್ರೂ ಬಿಡದೆ ಬೆನ್ನಟ್ಟಿ ಗುಂಡು ಹಾರಿಸಿದ ದುಷ್ಕರ್ಮಿಗಳು
ಡೆಹ್ರಾಡೂನ್: ಬಿಜೆಪಿ ಕೌನ್ಸಿಲರ್ ಒಬ್ಬರನ್ನು ಇಂದು ಬೆಳಗ್ಗೆ ಅವರ ಮನೆಯ ಮುಂದೆಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ನಡೆದಿದೆ.
ಪ್ರಕಾಶ್ ಧಾಮಿ (40) ಮೃತ ಬಿಜೆಪಿ ಕೌನ್ಸಿಲರ್. ರುದ್ರಪುರ ಮಹಾನಗರ ಪಾಲಿಕೆಯಲ್ಲಿ ಕೌನ್ಸಿಲರ್ ಆಗಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಈ ಹತ್ಯೆ ನಡೆದಿದ್ದು, ಕೆಲವು ಅಪರಿಚಿತರು ಕಾರಿನಲ್ಲಿ ಬಂದು ಏಕಾಏಕಿ ಗುಂಡಿನ ದಾಳಿ ಮಾಡಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಕೆಲ ದುಷ್ಕರ್ಮಿಗಳು ಕೌನ್ಸಿಲರ್ ಪ್ರಕಾಶ್ ಧಾಮಿ ಮನೆಗೆ ಬಂದಿದ್ದಾರೆ. ನಂತರ ಅವರನ್ನು ಮನೆಯ ಹೊರಗೆ ಬರುವಂತೆ ಕರೆದಿದ್ದಾರೆ. ಈ ವೇಳೆ ಪ್ರಕಾಶ್ ಧಾಮಿ ಕಾರಿನ ಹತ್ತಿರ ತಲುಪುತ್ತಿದ್ದಂತೆ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರಕಾಶ್ ಧಾಮಿ ರಕ್ಷಣೆಗಾಗಿ ಓಡಲು ಪ್ರಯತ್ನಿಸಿದ್ದಾರೆ. ಆದರೆ ದುಷ್ಕರ್ಮಿಗಳು ಅವರನ್ನ ಬೆನ್ನಟ್ಟಿ ಮತ್ತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ಕೂಡಲೇ ಪ್ರಕಾಶ್ ಧಾಮಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಷ್ಟರಲ್ಲಿಯೇ ಪ್ರಕಾಶ್ ಧಾಮಿ ಮೃತಪಟ್ಟಿದ್ದರು.
ಇದು ಹಳೆಯ ದ್ವೇಷದಿಂದ ಸಂಭವಿಸಿರಬಹುದು. ಸದ್ಯಕ್ಕೆ ನಾವು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ಪೊಲೀಸ್ ತಂಡಗಳನ್ನು ರಚಿಸಿದ್ದೇವೆ. ಶೀಘ್ರದಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕಾಶ್ ಧಾಮಿ 13ನೇ ವಾರ್ಡ್ ನಿಂದ 2018ರಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಅವರು ಬಿಜೆಪಿಗೆ ಸೇರಿದ್ದರು.