– ಬಾಲಕಿ ಸಾವಿನ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ್ರಾ?
ತಿರುವನಂತಪುರಂ: ವೈದ್ಯರೊಬ್ಬರು ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯನಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆಯಷ್ಟೆ ವೈದ್ಯರ ಆಸ್ಪತ್ರೆಯಲ್ಲಿ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಹೀಗಾಗಿ ಬಾಲಕಿಯ ಸಾವಿಗೂ ಇವರ ಸಾವಿಗೂ ಏನಾದರೂ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡಾ.ಅನೂಪ್ ಕೃಷ್ಣ (32) ಮೃತ ವೈದ್ಯ. ಡಾ.ಕೃಷ್ಣ ಜಿಲ್ಲೆಯ ಕಡಪ್ಪಕಡದಲ್ಲಿರುವ ಅನೂಪ್ ಆರ್ಥೋ ಕೇರ್ ಆಸ್ಪತ್ರೆ ನಡೆಸುತ್ತಿದ್ದಾರೆ. ಒಂದು ವಾರದ ಹಿಂದೆ ಆರು ವರ್ಷದ ಬಾಲಕಿ ವೈದ್ಯರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಮೃತಪಟ್ಟಿದ್ದಳು. ಆದರೆ ಅನಸ್ತೇಶಿಯಾದಿಂದ ನಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಪೋಷಕರು ಆಸ್ಪತ್ರೆಯ ವಿರುದ್ಧ ದೂರು ನೀಡಿದ್ದರು.
“ಅಸಹಜ ಸಾವು ಎಂದು ನಾವು ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಿದ್ದೆವು. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಳು. ಆದರೆ ಈ ಎರಡು ಘಟನೆಗಳು ಸಂಬಂಧ ಹೊಂದಿದೆಯೇ ಎಂದು ನಮಗೆ ಖಚಿತವಿಲ್ಲ. ವೈದ್ಯರು ಆತ್ಮಹತ್ಯೆ ಮಾಡಿಕೊಂಡಿರಹುದು. ಆದರೆ ಅವರ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಮನೆಗೆ ಗೋಡೆಯ ಮೇಲೆ ಕ್ಷಮಿಸಿ ಎಂದು ಬರೆದಿದ್ದರು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅನಸ್ತೇಶಿಯಾ ನೀಡಿದ್ದರಿಂದ ನಮ್ಮ ಮಗು ಸಾವನ್ನಪ್ಪಿದೆ ಎಂದು ಸಂಬಂಧಿಕರು ಆರೋಪಿಸಿದ್ದರು. ಕಳೆದ ವಾರ ಆಧ್ಯಾ ಲಕ್ಷ್ಮಿಯನ್ನು ಶಸ್ತ್ರಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೃದಯಾಘಾತದಿಂದ ಬಾಲಕಿ ಮೃತಪಟ್ಟಿದ್ದಳು. ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯ ಮರಣೋತ್ತರ ವರದಿ ಇನ್ನೂ ಬಂದಿಲ್ಲ. ಹೆಚ್ಚಿನ ವಿವರಗಳು ಮರಣೋತ್ತರ ವರದಿಯ ನಂತರವೇ ತಿಳಿಯುತ್ತದೆ. ಈ ಘಟನೆಯ ನಂತರ ವೈದ್ಯರು ಖಿನ್ನತೆಗೆ ಒಳಗಾಗಿದ್ದಾರೆಯೇ ಎಂಬುದು ನಮಗೆ ಖಚಿತವಿಲ್ಲ. ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಾ.ಅನೂಪ್ ಕೃಷ್ಣ ಅವರ ಆರ್ಥೋ ಕೇರ್ ಆಸ್ಪತ್ರೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಇದು ಮೂಳೆ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಒದಗಿಸುತ್ತದೆ. ಆಸ್ಪತ್ರೆಯಲ್ಲಿ ಮಕ್ಕಳ ಮೂಳೆ ಕಾಯಿಲೆಗಳ ಚಿಕಿತ್ಸೆಗೆ ವಿಶೇಷ ವಿಭಾಗವಿದೆ. ಡಾ.ಅನೂಪ್ ಕೃಷ್ಣ ಆರ್ಥೋದಲ್ಲಿ ಮಾಸ್ಟರ್ ಆಫ್ ಸೈನ್ಸ್ (ಎಂಎಸ್) ಮಾಡಿದ್ದರು. ಅಲ್ಲದೇ ಅನೂಪ್ ಮೂಳೆಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದರು ಎಂದು ವರದಿಯಾಗಿದೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಬಾಲಕಿ ಸಾವನ್ನಪ್ಪಿದ್ದರಿಂದ ಖಿನ್ನತಗೆ ಒಳಗಾಗಿ ಡಾ.ಅನೂಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.