ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಸತತ ಎರಡು ತಿಂಗಳಿನಿಂದ ಲಾಕ್ಡೌನ್ ಜಾರಿಯಾಗಿದ್ದು, ಕೆಲಸ ವಿಲ್ಲದೆ, ಮನೆಯಲ್ಲಿ ದಿನಸಿ ಇಲ್ಲದೆ ಪರದಾಡುತಿದ್ದ ಕುಟುಂಬಕ್ಕೆ ನಿಮ್ಮ ಪಬ್ಲಿಕ್ ಟಿವಿ ಮನೆಯೇ ಮಂತ್ರಾಲಯ ಕಾರ್ಯಕ್ರಮದ ಮೂಲಕ ಕಷ್ಟ ನಿವಾರಿಸುವ ಕೆಲಸ ಮಾಡುತ್ತಿದೆ.
ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದ ಪ್ರೇಮ ಅವರ ಬಡ ಕುಟುಂಬಕ್ಕೆ ಟಿ.ದಾಸರಹಳ್ಳಿ ಕ್ಷೇತ್ರದ ಶೆಟ್ಟಿಹಳ್ಳಿ ಗ್ರಾಮದ ಬಿಜೆಪಿ ಮುಖಂಡ ಬಿ.ಸುರೇಶ್, ಶ್ರೀ ಸಾಯಿ ಫೌಂಡೇಶನ್ ನೊಂದಿಗೆ ನೆರವಿಗೆ ಧಾವಿಸಿದ್ದಾರೆ. ಕುಟುಂಬಕ್ಕೆ 20 ದಿನಕ್ಕೆ ಬೇಕಾಗಿರುವ ಎಲ್ಲ ರೀತಿಯ ದಿನಸಿ ಸಾಮಾಗ್ರಿಗಳು ಸೇರಿದಂತೆ ತರಕಾರಿ ಹಾಗೂ ಮನೆಯ ವಿದ್ಯುತ್ ಬಿಲ್ 3 ಸಾವಿರ ರೂ.ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಪಬ್ಲಿಕ್ ಟಿವಿಯ ಕಾರ್ಯಕ್ರಮಕ್ಕೆ ಸ್ಪಂದಿಸಿ ಮೊದಲು ಪ್ರೇಮ ಅವರ ಮನೆಗೆ ಭೇಟಿ ನೀಡಿದಾಗ ಸುರೇಶ್ ಅವರು ಮಕ್ಕಳಿಗೆ ಮಾಸ್ಕ್ ಸ್ಯಾನಿಟೈಸರ್ ನೀಡಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು. ಪ್ರೇಮ ಅವರ ಪತಿ ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇದೀಗ ಅತ್ತೆ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಕೂಲಿ ಕೆಲಸ ಮಾಡಿ ಸಾಕುತ್ತಿದ್ದಾರೆ. ಇವರ ಕಷ್ಟ ಅರಿತ ಶೆಟ್ಟಿಹಳ್ಳಿಯ ಸುರೇಶ್ ಅವರು ನೆರವಿಗೆ ಧಾವಿಸಿದ್ದಾರೆ. ಇದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.