– ಈ ತಪ್ಪು ಮುಂದೆ ಆಗಲ್ಲ, ಶೀಘ್ರದಲ್ಲೇ ಸುತ್ತೋಲೆ
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಕೋವಿಡ್ ಮಾರ್ಗಸೂಚಿ ಪ್ರಕಾರ ಮನೆಯಲ್ಲಿ ಕೊರೊನಾ ವ್ಯಾಕ್ಸಿನ್ ಪಡೆಯಲು ಯಾರಿಗೂ ಅವಕಾಶವಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಅವರ ನಡೆಗೆ ಆರೋಗ್ಯ ಸಚಿವ ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಆರೋಗ್ಯ ಸಚಿವರು, ನಾನು ವೈಯಕ್ತಿಕವಾಗಿ ಪಾಟೀಲರ ಜೊತೆ ಮಾತನಾಡುತ್ತೇನೆ. ಅದೇ ರೀತಿ ಕೊರೊನಾ ವ್ಯಾಕ್ಸಿನ್ ಪಡೆಯುವುದರ ಕುರಿತಾಗಿ ಸುತ್ತೋಲೆ ಹೊರಡಿಸಲಾಗುತ್ತದೆ. ಸಚಿವರು ಸೂಚನೆ ನೀಡಿದ್ದರಿಂದ ನಮ್ಮ ಅಧಿಕಾರಿಗಳು ಪ್ರಶ್ನಿಸಿಲ್ಲ. ಹಾಗಾಗಿ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಿದ್ದಾರೆ ಎಂದು ಹೇಳಿದರು.
ಮನೆಯಲ್ಲಿ ಲಸಿಕೆ ಪಡೆದ್ರೆ ತಪ್ಪಿಲ್ಲ ಅನ್ನೋ ತಪ್ಪುಗ್ರಹಿಕೆಯಿಂದಾಗಿ ಈ ಘಟನೆ ನಡೆದಿದೆ. ಬಿ.ಸಿ.ಪಾಟೀಲರು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಸ್ವಲ್ಪ ತಪ್ಪಾಗಿದ್ದು, ಮತ್ತೇ ಈ ರೀತಿ ಆಗದಂತೆ ಎಚ್ಚರವಹಿಸುತ್ತೇವೆ. ಅಧಿಕಾರಿಗಳು ಮಾರ್ಗಸೂಚಿಗಳ ಬಗ್ಗೆ ಹೇಳಬಹುದಾಗಿತ್ತು ಎಂದು ಸ್ಪಷ್ಟಪಡಿಸಿದರು.
ಬಿ.ಸಿ.ಪಾಟೀಲ್ ಮೊಂಡುವಾದ: ಇವತ್ತು ನನ್ನನ್ನು ಭೇಟಿಯಾಗಲು ಹಲವು ಜನರು ಬಂದಿದ್ದರು. ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಕಾಯಬೇಕಾಗಿತ್ತು. ಸ್ವಾಮಿ ಕಾರ್ಯದ ಜೊತೆಗೆ ಸ್ವ ಕಾರ್ಯ ಸಹ ಅಗಬೇಕು. ಆದ್ರೆ ಇದನ್ನು ವಿವಾದ ಅಂತ ಹೇಳಿದ್ರೆ ಏನು ಮಾಡಲು ಸಾಧ್ಯ. ವಿವಾದ ಅಂತ ಮಾಧ್ಯಮದವರು ಹೇಳಿದ್ರೆ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಳ್ಳುತ್ತಿದ್ದೆ ಎಂದು ತಮ್ಮ ನಡೆಯನ್ನ ಸಮರ್ಥಿಸಿಕೊಂಡು ಹಾರಿಕೆಯ ಉತ್ತರ ನೀಡಿದರು.
ನಮಗೆ ಕೆಲವೊಂದು ವಿಶೇಷ ಸೌಲಭ್ಯಗಳಿರುತ್ತೇವೆ. ಆ ಸೌಲಭ್ಯ ಬಳಸಿ ವಿಶೇಷ ಅಧಿಕಾರದಿಂದ ವೈದ್ಯಕೀಯ ಸಿಬ್ಬಂದಿಯನ್ನ ಕರೆಸಿ ಲಸಿಕೆ ಪಡೆದುಕೊಂಡಿದ್ದೇನೆ. 15 ದಿನ ಪ್ರವಾಸದಲ್ಲಿದ್ದರಿಂದ ಇವತ್ತು ಕ್ಷೇತ್ರಕ್ಕೆ ಬಂದಿದ್ದರಿಂದು ಬಹಳ ಕೆಲಸ ಇತ್ತು. ನಾಳೆ ಮತ್ತೆ ಅಧಿವೇಶನಕ್ಕೆ ಹೋಗಬೇಕಿತ್ತು ಎಂದು ಹೇಳಿದರು.