ನೆಲಮಂಗಲ: ಪಬ್ಲಿಕ್ ಟಿವಿ ವರದಿಯಿಂದ ನಾಪತ್ತೆಯಾಗಿದ್ದ ಪ್ರೀತಿಯ ಶ್ವಾನ ಮರಳಿ ಮಾಲೀಕನ ಮನೆ ಸೇರಿದೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಹರ್ಷ ಕ್ಯಾಂಪಸ್ ನಿಂದ ನಾಪತ್ತೆಯಾಗಿದ್ದ ಪ್ರೀತಿಯ ಶ್ವಾನ ʼಗುಂಡʼನಿಗಾಗಿ ನಾಲ್ಕು ದಿನ ಕುಟುಂಬಸ್ಥರು ಹುಡುಕಾಡಿದ್ದರು. ಬಳಿಕ ನಾಯಿ ನಾಪತ್ತೆಯಾದ ಸುದ್ದಿ ಪಬ್ಲಿಕ್ ಟಿವಿ ವೆಬ್ಸೈಟ್ನಲ್ಲಿ ಪ್ರಕಟವಾಗಿತ್ತು.
ವರದಿ ಓದಿದ್ದ ಅಕ್ಷಯ್ ಅವರಿಗೆ ನೆಲಮಂಗಲದ ಕಣ್ವ ಲೇಔಟ್ನಲ್ಲಿ ನಾಯಿ ಇರುವುದನ್ನು ನೋಡಿದ್ದಾರೆ. ಬಳಿಕ ಅಕ್ಷಯ್ ಮಾಲೀಕರಿಗೆ ಶ್ವಾನ ಇರುವ ಬಗ್ಗೆ ಸುಳಿವು ನೀಡಿದ್ದಾರೆ. ಈ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಮಾಲೀಕರು ನಾಯಿಯನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಹರ್ಷ ಗ್ರೂಪ್ ಮಾಲೀಕ ಶಿವಕುಮಾರ್ ಹಾಗೂ ಪುತ್ರ ಯಶಸ್ ಶ್ವಾನದ ಸುಳಿವು ನೀಡಿದ ಯುವಕ ಅಕ್ಷಯ್ ಗೆ 10 ಸಾವಿರ ನಗದು ಬಹುಮಾನ ನೀಡಿ ಧನ್ಯವಾದ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಶ್ವಾನದ ಮಾಲೀಕ ಯಶಸ್, ನಾಲ್ಕು ದಿನದಿಂದ ಪ್ರೀತಿಯ ಗುಂಡ ಕಾಣದೇ ಇದ್ದಾಗ ಬೇಸರವಾಗಿತ್ತು. ಅಲ್ಲದೆ ನಮ್ಮ ಮನೆಯಲ್ಲಿ ಇದ್ದ ಉಳಿದ ಶ್ವಾನಗಳು ಸಹ ಊಟ, ನೀರು ಸೇವಿಸದೆ ಮಂಕಾಗಿ ಹೋಗಿದ್ದವು. ಇದರಿಂದ ನಮಗೆ ಸಾಕಷ್ಟು ನಿರಾಸೆಯಾಗಿತ್ತು. ಪಬ್ಲಿಕ್ ಟಿವಿಯ ವರದಿಯನ್ನು ಓದಿದ ಅಕ್ಷಯ್ ಕಣ್ವ ಬಡಾವಣೆಯ ಮನೆಯಲ್ಲಿ ಈ ಶ್ವಾನವನ್ನ ನೋಡಿರುವುದಾಗಿ ಮಾಹಿತಿ ನೀಡಿದರು. ಸ್ಥಳಕ್ಕೆ ಹೋಗಿ ಪ್ರೀತಿಯಿಂದ ಕರೆದಾಗ ನನ್ನ ಗುಂಡ ಬಂದಿದ್ದಾನೆ ಎಂದು ತಿಳಿಸಿದರು.