ಮಡಿಕೇರಿ: ಪ್ರತೀ ಜೀವಿಗೂ ಬದುಕುವ ಸ್ವಾತಂತ್ರ್ಯವಿದೆ. ಆದರೆ ಇಂದು ಮಾನವೀಯತೆ ದುರ್ಬಲವಾಗುತ್ತಿದ್ದು, ಮನುಷ್ಯ ಪ್ರಕೃತಿಯ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾನೆ ಎಂದು ವಸತಿ ಸಚಿವ ವಿ. ಸೋಮಣ್ಣ ವಿಷಾಧ ವ್ಯಕ್ತಪಡಿಸಿದರು.
ಮಡಿಕೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಮಾತನಾಡಿದ ಅವರು, ಕೇರಳದ ಮಲ್ಲಾಪುರಂನಲ್ಲಿ ಕಿಡಿಗೇಡಿಗಳು ಅನಾನಸ್ ಹಣ್ಣಿಗೆ ಸ್ಫೋಟಕ ಇಟ್ಟು ಗರ್ಭಿಣಿ ಆನೆಗೆ ತಿನ್ನುವಂತೆ ಮಾಡಿ ಬಳಿಸ ಸ್ಪೋಟಿಸಿದ್ದಾರೆ. ಇದರಿಂದ ಆನೆ ನೋವಿನಿಂದ ನೀರಿನಲ್ಲಿ ಸಾವನ್ನಪ್ಪಿತು. ಇದು ಅತ್ಯಂತ ನೋವಿನ ಮತ್ತು ದುರದೃಷ್ಟಕರ ಸಂಗತಿ. ಇಂತಹ ಹೇಯ ಕೃತ್ಯಗಳು ಎಂದೂ ನಡೆಯಬಾರದು ಮಾನವ ಇದನ್ನು ಎಚ್ಚೆತ್ತುಕೊಳ್ಳಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.
ಕೊಡಗು ವಿಶೇಷವಾದ ಪ್ರಾಕೃತಿಕ ಸಂಪತ್ತು ಹೊಂದಿ ದೇಶಕ್ಕೆ ಅಷ್ಟೇ ಅಲ್ಲ ವಿಶ್ವದ ಪರಿಸರಕ್ಕೆ ಕೊಡುಗೆ ನೀಡಿದೆ. ಪರಿಸರದಲ್ಲಿ ಮನುಷ್ಯ ಅಷ್ಟೇ ಅಲ್ಲ, ಮರ, ಗಿಡ ಪ್ರಾಣಿ ಪಕ್ಷಿಗಳು ಸ್ವತಂತ್ರವಾಗಿ ಬದುಕುವುದಕ್ಕೆ ಅವಕಾಶವಿದೆ ಎಂದರು.
ಇದೇ ವೇಳೆ ಮಡಿಕೇರಿಯ ಮರುನಿರ್ಮಾಣಗೊಂಡಿರುವ ಗ್ರಂಥಾಲಯದ ಮುಂಭಾಗದಲ್ಲಿ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಗಿಡಗಳನ್ನು ನೆಟ್ಟು ನೀರೆರದರು.