ಮಧ್ಯಪ್ರದೇಶದಲ್ಲಿ ದಿಗ್ವಿಜಯದ ಬೆಳ್ಳಿಗೆರೆ, ರಾಜಸ್ಥಾನದಲ್ಲಿ ಗೆಲುವಿನ ರಾಜಗೆರೆ, ಲೋಕ ಸಮರಕ್ಕೆ ಮುನ್ನುಡಿ: ವಿಜಯೇಂದ್ರ

Public TV
2 Min Read
B.Y Vijayendra

ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ (Assembly Election Results) ಮೂರರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೇ ಬಿಜೆಪಿ (BJP) ರಾಜ್ಯಾಧ್ಯಕ್ಷ್ಯ ಬಿ.ವೈ ವಿಜಯೇಂದ್ರ (B.Y Vijayendra), ಮಧ್ಯಪ್ರದೇಶದಲ್ಲಿ ದಿಗ್ವಿಜಯದ ಬೆಳ್ಳಿಗೆರೆ, ರಾಜಸ್ಥಾನದಲ್ಲಿ ಗೆಲುವಿನ ರಾಜಗೆರೆ ಅಚ್ಚೊತ್ತಿರುವ ಮತದಾರರು ಛತ್ತೀಸ್‍ಗಢದಲ್ಲಿ ವಿರೋಚಿತ ಗೆಲುವಿಗೆ ಬೆಂಬಲ ನೀಡಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಮತದಾರರು ಬರುವ 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಪರ ಅದ್ಭುತ ಮುನ್ನುಡಿ ಬರೆದಿದ್ದಾರೆ. ಜನ ದೇಶದ ರಕ್ಷಣೆಯ ಗ್ಯಾರಂಟಿ ಪರ ನಿಲ್ಲುತ್ತಾರೆ. ಆಮಿಷದ ಗ್ಯಾರಂಟಿಗಳ ಪರ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ಸೈಮಿಫೈನಲ್ ಫಲಿತಾಂಶ ರವಾನಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Madhya Pradesh: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಸಿಎಂ ಅಭಿನಂದನೆ ಪೋಸ್ಟರ್‌ ಹಾಕಿದ ಕಾಂಗ್ರೆಸ್‌

ಭಾರತಕ್ಕಾಗಿ ಲೋಕ ಸಮರ-ಮೋದಿಜೀಗಾಗಿ ಧರ್ಮ ವಿಜಯ ಎಂಬುದು ನಮ್ಮ ಮುಂದಿನ ಗುರಿಯಾಗಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ ಮತದಾರ ಬಂಧುಗಳಿಗೆ ಕೃತಜ್ಞತಾ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ಇಂಡಿಯಾ ಒಕ್ಕೂಟ ಹೇಳಿತ್ತು. ಈಗ ದೇಶದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಬಯಕೆಯನ್ನು ಈ ಫಲಿತಾಂಶದ ಮೂಲಕ ನೀಡಿದ್ದಾರೆ. ಪಂಚರಾಜ್ಯಗಳ ಫಲಿತಾಂಶ ಸೆಮಿಫೈನಲ್ ಎನ್ನಲಾಗಿತ್ತು. ಈ ಪಂದ್ಯದಲ್ಲಿ ಬಿಜೆಪಿ ಪರ ಅಲೆ ಸುನಾಮಿ ರೀತಿಯಲ್ಲಿ ಎದ್ದಿರುವುದು ಕಾಣುತ್ತಿದೆ. ಈ ವಿಜಯ ಯಾತ್ರೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವವರೆಗೂ ಇರಲಿದೆ ಎಂದಿದ್ದಾರೆ.

ತೆಲಂಗಾಣದಲ್ಲಿ ಬಹಳ ನಿರೀಕ್ಷೆ ಇರಲಿಲ್ಲ. ಕರ್ನಾಟಕ ಫಲಿತಾಂಶದಿಂದ ನಮಗೆ ಹಿನ್ನಡೆಯಾಗಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ, ತೆಲಂಗಾಣದಲ್ಲಿ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲಲಿದೆ. ಗ್ಯಾರಂಟಿ ಎಲ್ಲಾ ಕಡೆ ವರ್ಕ್ ಆಗಿಲ್ಲ. ಕರ್ನಾಟಕದಲ್ಲಿ ಮತದಾರರ ಕಣ್ಣಿಗೆ ಬೂದಿ ಎರಚಿದಂತೆ ತೆಲಂಗಾಣದಲ್ಲೂ ಬೂದಿ ಎರಚಿ ಗೆದ್ದಿದ್ದಾರೆ. ಬಿಆರ್‍ಎಸ್ ಆಡಳಿತ ವಿರೋಧಿ ಅಲೆ ನಮಗೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಆರೇ ತಿಂಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಕಾರ್ಯವೈಖರಿಯನ್ನು ನೋಡಿ ಬೇಸತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಛತ್ತೀಸ್‍ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಗೆಲುವಿನತ್ತ ಸಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ (Congress) ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

Share This Article