– ಯುವತಿ ಮನೆಯವರಿಗೆ ಬೆದರಿಕೆ
– ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ ತಾಯಿ
ಹಾಸನ: ಸೋಮವಾರ ವಿವಾಹ ನಿಗದಿಯಾಗಿದ್ದ ಮದುಮಗಳಿಗೆ ಯುವಕನೊಬ್ಬ ಬಲವಂತವಾಗಿ ಆಕೆಯ ಮನೆಯವರ ಎದುರಿನಲ್ಲಿಯೇ ತಾಳಿ ಕಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಜನವರಿ 25 ರಂದು ಸುಜಿತ್ ಕೃಷ್ಣ ಎಂಬವರ ಜೊತೆ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಸತೀಶ್ ಎಂಬಾತ ಮದುವೆ ನಿಶ್ಚಯವಾಗಿರುವ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಬಳಿಕ ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ಪೋಷಕರಿಗೆ ಬೆದರಿಕೆಯೊಡ್ಡಿದ್ದಾನೆ. ತನ್ನ ಸ್ನೇಹಿತರನ್ನು ಯುವತಿ ಮನೆಗೆ ಕರೆದುಕೊಂಡು ಹೋಗಿದ್ದ ಸತೀಶ್, ಅಲ್ಲಿಯೇ ಅರಿಶಿಣದ ಕೊಂಬನ್ನು ಕಟ್ಟಿ ಮದುವೆಯಾಗಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ.
ಈ ವಿಚಾರವಾಗಿ ಸಕಲೇಶಪುರ ನಗರದ ಪೊಲೀಸ್ ಠಾಣಾ ಮೇಟ್ಟಿಲೇರಿದ ಯುವತಿ ತಾಯಿ, ತನ್ನ ಮಗಳಿಗೆ ಇಷ್ಟವಿಲ್ಲದಿದ್ದರೂ ತಮ್ಮನ್ನು ಬೆದರಿಸಿ ಬಲವಂತವಾಗಿ ಮದುವೆಯಾಗಿ ಆಕೆಯನ್ನು ಸತೀಶ್ ಕರೆದೊಯ್ದಿದ್ದಾನೆ. ಅಲ್ಲದೆ ತಮ್ಮ ಮಗಳಿಗೆ ಜೀವ ಬೆದರಿಕೆ ಇದೆ ಎಂದು ದೂರು ದಾಖಲಿಸಿದ್ದಾರೆ. ಹಾಗಾಗಿ ಆಕೆಯನ್ನು ರಕ್ಷಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರಕರಣ ಕುರಿತಂತೆ ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.