– ವಿವಾಹ ಆಗೋದಾಗಿ ನಂಬಿಸಿ ದೈಹಿಕ ಸಂಬಂಧ
ಹೈದರಾಬಾದ್: ವಿವಾಹಿತ ಯುವತಿಯನ್ನ ಪ್ರಿಯಕರನೇ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ತೇಜಸ್ವಿನಿ (21) ಕೊಲೆಯಾದ ಯುವತಿ. ಅಜ್ಜ ಮತ್ತು ಅಜ್ಜಿ ಮನೆಗೆ ಬಂದಿದ್ದು, ಶನಿವಾರ ಮಧ್ಯಾಹ್ನ ಮನೆಯ ಹೊರಗೆ ಮಲಗಿದ್ದಾಗ ಪ್ರಿಯಕರ ಬಂದು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಏನಿದು ಪ್ರಕರಣ?
ಮೃತ ತೇಜಸ್ವಿನಿ ಇತ್ತೀಚೆಗಷ್ಟೆ ಮದುವೆಯಾಗಿದ್ದಳು. ಆದರೆ ಮಾನಸಿಕ ಸಮಸ್ಯೆಗಳಿಂದ ಪತಿಯಿಂದ ದೂರವಾಗಿದ್ದು, ತನ್ನ ತಂದೆಯ ಜೊತೆ ಕೆಲವು ತಿಂಗಳಿನಿಂದ ವಾಸ ಮಾಡುತ್ತಿದ್ದಳು. ಈ ವೇಳೆ ತನ್ನ ಆಪ್ತ ಸಂಬಂಧಿ ದುರ್ಗಾ ಪ್ರಸಾದ್ (25) ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ದುರ್ಗಪ್ರಸಾದ್ ಕೂಡ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಸಂಬಂಧವನ್ನು ಮುಂದುವರಿಸಿದ್ದನು.
ಇತ್ತೀಚೆಗೆ ಆರೋಪಿ ದುರ್ಗ ಪ್ರಸಾದ್, ತೇಜಸ್ವಿನಿಯನ್ನು ಮದುವೆಯಾಗಲು ಇಷ್ಟಪಡುವುದಿಲ್ಲ. ಹೀಗಾಗಿ ಆಕೆಯನ್ನು ದೂರ ಮಾಡುತ್ತಿದ್ದನು. ಆದರೆ ಯುವತಿ ಮದುವೆ ಆಗುವಂತೆ ಪ್ರಿಯಕರನನ್ನು ಒತ್ತಾಯಿಸುತ್ತಿದ್ದಳು. ತೇಜಸ್ವಿನಿ ಮೂರು ದಿನಗಳ ಹಿಂದೆ ತನ್ನ ಅಜ್ಜಿಯ ಮನೆಗೆ ಬಂದಿದ್ದಳು. ಶನಿವಾರ ಮಧ್ಯಾಹ್ನ ಮನೆಯ ಹೊರಗೆ ಮಂಚದ ಮೇಲೆ ಮಲಗಿಕೊಂಡು, ಫೋನಿನಲ್ಲಿ ಹಾಡುಗಳನ್ನು ಕೇಳುತ್ತಿದ್ದಳು.
ಈ ವೇಳೆ ದುರ್ಗಪ್ರಸಾದ್ ಬಂದು ಚಾಕುವಿನಿಂದ ಆಕೆಯ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. ಅಲ್ಲದೇ ಆಕೆಯ ಕತ್ತನ್ನು ಸಹ ಕೊಯ್ದಿದ್ದಾನೆ. ತಕ್ಷಣ ತೇಜಸ್ವಿ ಕೂಗಿಕೊಂಡಿದ್ದಾಳೆ. ಆಗ ಸ್ಥಳೀಯರು ಆಗಮಿಸುತ್ತಿದ್ದಂತೆ ಆರೋಪಿ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದಾಗಿ ತೇಜಸ್ವಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮಾಹಿತಿ ತಿಳಿದು ಗ್ರಾಮೀಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ನಡೆದ ಸ್ವಲ್ಪ ದೂರದಲ್ಲಿ ಆರೋಪಿ ಬಳಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದೆಡೆ ಆರೋಪಿ ದುರ್ಗಾ ಪ್ರಸಾದ್ ಶನಿವಾರ ಸಂಜೆ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.