ರಾಂಚಿ: ತನ್ನ ಜೊತೆ ವಿವಾಹವಾಗಲು ನಿರಾಕರಿಸಿದ್ದಕ್ಕೆ ಭಗ್ನ ಪ್ರೇಮಿಯೊಬ್ಬ ಹರಿತವಾದ ಆಯುಧದಿಂದ ತನ್ನ ಪ್ರೇಯಸಿ ಮೇಲೆಯೇ ದಾಳಿ ನಡೆಸಿರುವ ಘಟನೆ ಜಾರ್ಖಂಡ್ನ ಘರ್ವಾ ಜಿಲ್ಲೆಯಲ್ಲಿ ನಡೆದಿದೆ.
ಘರ್ವಾ ಜಿಲ್ಲೆಯ ಮಂಜಿಯೊನ್ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ರಹಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಯುವಕನನ್ನು ಹಜ್ರತ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನನ್ನು ವಿವಾಹವಾಗುವಂತೆ ಯುವತಿಯಗೆ ತುಂಬಾ ಪೀಡಿಸುತ್ತಿದ್ದ. ಆದರೆ ಯುವತಿ ಇದನ್ನು ನಿರಾಕರಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಎಷ್ಟೇ ಕೇಳಿಕೊಂಡರೂ ಹಜ್ರತ್ನ ಮಾತನನ್ನು ತಿರಸ್ಕರಿಸಿ, ಬೇರೆ ಹುಡುಗನನ್ನು ವಿವಾಹವಾಗಲು ಯುವತಿ ನಿರ್ಧರಿಸಿದ್ದಾಳೆ. ಇದರಿಂದ ಕೋಪಕೊಂಡ ಹಜ್ರತ್ ಯುವತಿಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಪ್ಲಾನ್ ಮಾಡಿ, ಮನೆಯಲ್ಲಿ ಯುವತಿಯ ಪೋಷಕರು ಇಲ್ಲದ್ದನ್ನು ಮನಗಂಡು ದಾಳಿ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಯುವತಿಯ 10 ವರ್ಷದ ತಮ್ಮ ಹಾಗೂ ಕೆಲಸ ಮಾಡುತ್ತಿದ್ದ ಕೆಲ ಕಾರ್ಮಿಕರು ಮನೆಯಲ್ಲೇ ಇದ್ದರು. ಘಟನೆಯನ್ನು ಕಂಡ ಬಾಲಕ ತಕ್ಷಣವೇ ಮನೆಯಲ್ಲಿನ ಇತರ ಕಾರ್ಮಿಕರಿಗೆ ತಿಳಿಸಿದ್ದಾನೆ. ಕಾರ್ಮಿಕರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಯುವತಿಯನ್ನು ರಕ್ಷಿಸಿದ್ದಾರೆ.
ಇಬ್ಬರು ಕಾರ್ಮಿಕರು ಯುವತಿಯನ್ನು ಮಂಜಿಯೊನ್ ರೆಫರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪ್ರಕರಣ ಗಂಭೀರವಿದ್ದ ಕಾರಣ ದಾಖಲಿಸಿಕೊಂಡಿಲ್ಲ. ಬಳಿಕ ಗವ್ರ್ಹಾ, ನಂತರ ರಾಂಚಿಗೆ ಕೊಂಡೊಯ್ದಿದ್ದಾರೆ. ಪೊಲೀಸರು ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.