ರಾಂಚಿ: ಮದುವೆಯಾಗಲು ಇಷ್ಟವಿಲ್ಲ ಎಂದು ಕಂಪನಿಯೊಂದರ ಮಹಿಳಾ ಎಂಜಿನಿಯರ್ ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದೆ.
ಮೃತಳನ್ನು ದ್ರೌಪದಿ ಕುಮಾರಿ(26) ಎಂದು ಗುರುತಿಸಲಾಗಿದೆ. ಈಕೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಎಲ್ಲರೂ ಈಕೆಯನ್ನು ಬಿನ್ನಿ ಎಂದು ಪ್ರೀತಿಯಿಂದ ಕರೆಯುತ್ತಿದ್ದು, ಇದೀಗ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬಿನ್ನಿ ಕೋಲ್ಕತ್ತಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಜಾರ್ಖಂಡ್ನ ಈಸ್ಟ್ ಸಿಂಗ್ ಬುಮ್ ಜಿಲ್ಲೆಯ ಹರ್ ಹರ್ ಗುಟುನಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. ರಾತ್ರಿ ಕೋಣೆಯಲ್ಲಿ ಮಲಗಿದ್ದ ಬಿನ್ನಿ ಬೆಳಗ್ಗೆ ಸುಮಾರು ಹೊತ್ತಾದರೂ ಬಾಗಿಲು ತೆರೆದಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಪೋಷಕರು ಹಾಗೂ ಕುಟುಂಬಸ್ಥರು ಬಾಗಿಲು ಒಡೆದಿದ್ದಾರೆ. ಈ ವೇಳೆ ಆಕೆ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಇತ್ತ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಮದುವೆಯಾಗಲು ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿನ್ನಿ ತಿಳಿಸಿದ್ದಾಳೆ. ಸದ್ಯ ಪೊಲೀಸರು ಬಿನ್ನಿ ಮೊಬೈಲ್, ಲಾಪ್ ಟಾಪ್ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಕಂಡುಹಿಡಿಯಲಿದ್ದಾರೆ.