ಕೊಪ್ಪಳ: ಸಿದ್ದರಾಮಯ್ಯ, ಈಶ್ವರಪ್ಪ ಮದ್ದಾನೆಗಳು. ಹೀಗಾಗಿ ಮದ್ದಾನೆಗಳು ಗುದ್ದಾಡುವಾಗ ಗುಬ್ಬಿ ಹೋಗಿ ಬುದ್ಧಿ ಹೇಳುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಗಿಣಗೇರಿಯಲ್ಲಿ ಮಾತನಾಡಿದ ಅವರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಎರಡೂ ಮದ್ದಾನೆಗಳು, ಅವರಿಗೆ ಅವರೇ ಉತ್ತರ ಕೊಡುತ್ತಾರೆ. ಅವರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ ಎಂದರು.
ಲಾಕ್ಡೌನ್ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದು, 18 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಲಾಕ್ಡೌನ್ ಮಾಡುವುದು ಸರಿಯಲ್ಲ, ಜಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಜನ ನಿಯಂತ್ರಣ ಹಾಕಿಕೊಳ್ಳಬೇಕು. ಜನತೆ ಸಹಕಾರ ಕೊಡಬೇಕು. ಮಾಹಾರಾಷ್ಟ್ರ, ದೆಹಲಿಯಲ್ಲಿ ಅತೀ ಹೆಚ್ಚು ಕೇಸ್ ಇದ್ದರೂ ಲಾಕ್ಡೌನ್ ಘೋಷಣೆಯಾಗಿಲ್ಲ. ಕಳೆದ ಬಾರಿ ಜನರು ಅನುಭವಿಸಿದ್ದು, ಎಚ್ಚೆತ್ತುಕೊಳ್ಳಬೇಕು, ಸಹಕಾರ ಮಾಡದೇ ಹೋದರೆ ಲಾಕ್ಡೌನ್ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನಿವಾರ್ಯವಾಗಿದ್ದು, ಚುನಾವಣೆ ಮಾಡುವವರು ಮಾಡುತ್ತಾರೆ. ನಿಯಂತ್ರಣ ಮಾಡೋರು ನಿಯಂತ್ರಣ ಮಾಡುತ್ತಾರೆ. ಉಪ ಚುನಾವಣೆಯ ಮೂರು ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ, ಇಂದು ಕೊರೊನಾ ನಿಯಂತ್ರಣಕ್ಕೆ ಸಭೆ ಕರೆದಿದ್ದು, ನಾವೇ ಅಂತರ ಕಾಯ್ತಿಲ್ಲ. ಚಿತ್ರರಂಗ, ಹೊಟೆಲ್ ಗೆ ಇಷ್ಟು ದಿನ ಅನುಮತಿ ಇತ್ತು. ಈಗ ನಿರ್ಬಂಧ ಹೇರಲಾಗಿದೆ ಎಂದರು.
ಬೆಳೆಗಳ ಬೆಲೆ ಕುಸಿತಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೀವು ಕಾಂಟ್ರಾವರ್ಸಿ ಪ್ರಶ್ನೆ ಕೇಳಬೇಡಿ ಎಂದು ಗರಂ ಆದರು. ರೈತರು ಸಂಕಷ್ಟದಲ್ಲಿದ್ದಾರೆ, ಈ ವೇಳೆ ಸರ್ಕಾರ ರೈತರ ನೆರವಿಗೆ ಬರಬೇಕು ಎನ್ನುವುದಕ್ಕೂ ಅವರು ಗರಂ ಆದರು. ಕೊನಗೆ ರೈತರು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದರೆ ಬೆಳೆ ನಾಶ ಮಾಡದೇ ಸ್ವಲ್ಪ ದಿನ ಕಾಯ್ದು ಮಾರಾಟ ಮಾಡಬೇಕು. ತುಂಗಭದ್ರಾ ಜಲಾಶಯದಿಂದ ಏ.30ರ ವರೆಗೂ ಕಾಲುವೆಗೆ ನೀರು ಹರಿಸಲು ಹಂತ ಹಂತವಾಗಿ ನಿರ್ಧಾರ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.