– ಕೊರೊನಾ ಎರಡನೇ ಅಲೆಯ ಆತಂಕ
– ನೆರೆ ರಾಜ್ಯದವರಿಗೆ ಬರಲು ನಿರ್ಬಂಧವಿಲ್ಲ
ಬೆಂಗಳೂರು: ನೆರೆ ರಾಜ್ಯಗಳವರಿಗೆ ನಾವು ಇಲ್ಲಿಗೆ ಬರಲು ನಿರ್ಬಂಧ ಹೇರಿಲ್ಲ. ಕೊರೊನಾ ತಪಾಸಣೆ ಕಡ್ಡಾಯ ಮಾತ್ರ ಮಾಡಿದ್ದೇವೆ, ಸಹಕರಿಸಬೇಕು. ಮದುವೆ ಸಮಾರಂಭಗಳಿಗೆ ಮಾರ್ಷಲ್ ಯೋಜನೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸಭೆ ನಡೆಸಿ ಮಾತನಾಡಿದ ಅವರು, ಕೇರಳ ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆಯ ಎಫೆಕ್ಟ್ ನಿಂದಾಗಿ ಬೆಂಗಳೂರಿನಲ್ಲಿಯೂ ಕೊರೊನಾ ಎರಡನೇ ಅಲೆಯ ಆತಂಕವಿದೆ. ಬೆಳಗಾವಿ, ವಿಜಯಪುರ ಡಿಸಿ, ಎಸ್ಪಿ, ಸಿಇಒ ಜೊತೆ ಚರ್ಚೆ ಮಾಡಿದ್ದಾರೆ. ಪ್ರಸ್ತುತ ಅಲ್ಲಿನ ಪರಿಸ್ಥಿತಿ ಹೇಗಿದೆ. ಮಹಾರಾಷ್ಟ್ರದಿಂದ ಬರುವವರ ತಪಾಸಣೆ ಹೇಗೆ ನಡೆದಿದೆ? ಗಡಿಭಾಗದಲ್ಲಿ ಕೋವಿಡ್ ಟೆಸ್ಟ್ ಸೆಂಟರ್ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಲಕ್ಷಣಗಳು ಕಂಡರೆ ತಪಾಸಣೆಗೊಳಪಡಿಸಿಕೊಳ್ಳಿ. ಹೈವೇನಲ್ಲಿ ಚಾಲಕರ ರಿಪೋರ್ಟ್ ಚೆಕ್ ಮಾಡಿಸಿ. ಕೋವಿಡ್ ಟೆಸ್ಟ್ ರಿಪೋರ್ಟ್ ಇದ್ಯಾ, ಇಲ್ವಾ ಚೆಕ್ ಮಾಡಿ ಒಂದು ವೇಳೆ ರಿಪೋರ್ಟ್ ಇಲ್ಲದಿದ್ದರೆ ಒಳಬಿಡಬೇಡಿ. ಚೆಕ್ ಪೋಸ್ಟ್ನಲ್ಲಿ ತೀವ್ರ ನಿಗಾವಹಿಸಿ. ನಿಪ್ಪಾಣಿ, ಝಳಕಿ ಚೆಕ್ ಪೋಸ್ಟ್ನಲ್ಲಿ ಕಟ್ಟು ನಿಟ್ಟು ಮಾಡಿ ಎಂದು ಬೆಳಗಾವಿ, ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಭೆ ಬಳಿಕ ಸಚಿವ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ಡಿಸಿ, ಎಸ್ ಪಿ, ಡಿಹೆಚ್ಒ, ಎಲ್ಲಾ ಮೆಡಿಕಲ್ ಕಾಲೇಜು ಮುಖ್ಯಸ್ಥರೊಂದಿಗೆ ಸಂವಾದ ಮಾಡಲಾಯಿತು. ಗಡಿಯಲ್ಲಿ ತಪಾಸಣೆ ಹೇಗಿದೆ. ಬಿಗಿಯಾಗಿ ನಡೆಯುತ್ತಾ ಇದೆಯಾ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೊರೊನಾ ವಾರಿಯರ್ಸ್ ಗೆ ವ್ಯಾಕ್ಸಿನ್ ನೀಡುವ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಕೆಲವು ಕಡೆ ವಾರಿಯರ್ಸ್ ಎರಡೆರಡು ಕಡೆ ನೊಂದಾಯಿಸಿರೋದ್ರಿಂದ ನಮ್ಮಲ್ಲಿ 1 ಲಕ್ಷ ಕಡಿಮೆ ಆಗುತ್ತೆದೆ. ಎರಡನೇ ಹಂತದ ವ್ಯಾಕ್ಸಿನ್ 18 ರಂದು ನಡೆಯುತ್ತೆ ಎಂದು ತಿಳಿಸಿದ್ದಾರೆ.
ನೆರೆ ರಾಜ್ಯಗಳವರಿಗೆ ನಾವು ಇಲ್ಲಿಗೆ ಬರಲು ನಿರ್ಬಂಧ ಹೇರಿಲ್ಲ. ತಪಾಸಣೆ ಕಡ್ಡಾಯ ಮಾತ್ರ ಮಾಡಿದ್ದೇವೆ, ಸಹಕರಿಸಬೇಕು. ನೆರೆ ರಾಜ್ಯಗಳಲ್ಲಿ ತಪ್ಪು ಸಂದೇಶ ಇದೆ. ಗಡಿ ಜಿಲ್ಲೆಗಳ ಬಗ್ಗೆ ವಿಶೇಷ ನಿಗಾ ಇಡಬೇಕಾಗಿದೆ. ಶೀಘ್ರದಲ್ಲಿ ನೆರೆ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ಮಾಡಿ ಅಲ್ಲಿನ ಸಹಕಾರ ಕೋರುತ್ತೇವೆ. ಅಲ್ಲಿಂದ ಬರುವವರಿಗೆ ಅಲ್ಲೇ ತಪಾಸಣೆ ಮಾಡಿ ರಿಪೋರ್ಟ್ ತರುವಂತೆ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ನಿಯಮ ಮೀರಿ ಸಮಾರಂಭಗಳು ನಡೆಯುತ್ತಿವೆ. ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಆಗುತ್ತದೆ. ಹೀಗಾಗಿ ಜನತೆ ಸ್ವಯಂ ನಿಯಂತ್ರಣ ಮಾಡಿ ಸಹಕರಿಸದಿದ್ದರೆ ಬಿಗಿ ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತೆದೆ. ಆ ಪರಿಸ್ಥಿತಿಗೆ ಬರುವಂತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಠ್ರದ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಿಸಿದ್ದಾರೆ. ಆ ಪರಿಸ್ಥಿತಿ ಬೇಕಾ ಎಂದು ಜನತೆಗೆ ಎಚ್ಚರಿಸಿ. ಎಚ್ಚರಿಕೆ ವಹಿಸದೇ ಮದುವೆ ಸಮಾರಂಭಗಳು ಎಗ್ಗಿಲ್ಲದೇ ನಡೆಯುತ್ತದೆ. ಮದುವೆ ಸಮಾರಂಭಗಳಿಗೆ ಮಾರ್ಷಲ್ ಗಳನ್ನು ಹಾಕಲು ತೀರ್ಮಾನ ಮಾಡಿದ್ದೇವೆ. ರಾಜ್ಯಾದ್ಯಂತ ಎಲ್ಲ ಮದುವೆ ನಡೆಯುವ ಕಡೆ ಒಬ್ಬ ಮಾರ್ಷಲ್ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.
ಕಲಬುರಗಿ 1.37, ಬೆಂಗಳೂರು 1.26, ದಕ್ಷಿಣ ಕನ್ನಡ 1.1 ಪಾಸಿಟಿವಿಟಿ ಹೆಚ್ಚಾಗುತ್ತಿದೆ. ಈ ಜಿಲ್ಲೆಗಳಲ್ಲಿ ಟೆಸ್ಟ್ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಮಾರ್ಚ್ ನಲ್ಲಿ 50 ವರ್ಷಕ್ಕಿಂತ ಹೆಚ್ಚಿನವರಿಗೆ ಲಸಿಕೆ ಘೋಷಿಸುತ್ತದೆ. ಲಾಕ್ ಡೌನ್ ಮಟ್ಟಕ್ಕೆ ಹೋಗಿಲ್ಲ. ಹೋಗಬಾರದು ಅನ್ನೋ ನಿಟ್ಟಿನಲ್ಲಿ ಕ್ರಮ ಎಂದಿದ್ದಾರೆ.