ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ರವರು ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆಯಲ್ಲಿ ಕೆಲವು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದಲ್ಲಿ ಜಿಲ್ಲೆಯಲ್ಲಿ ಮದುವೆ ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಮನೆಯಲ್ಲಿ 20 ಜನರಿಗೆ ಮೀರದಂತೆ ಸ್ಥಳೀಯ ಆಡಳಿತದ ಅನುಮತಿ ಪಡೆದು ನಡೆಸಬಹುದಾಗಿದೆ.
ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಇಂತಹ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಈ ಪ್ರದೇಶವನ್ನು ಸಂಪೂರ್ಣ ಲಾಕ್ಡೌನ್ ಮಾಡಲು ಆದೇಶಿಸಲಾಗಿದೆ. ಉಳಿದಂತೆ ರಾಜ್ಯ ಹೊರಡಿಸಿದ ಅನ್ಲಾಕ್ ನಿಯಮದಂತೆ ಜಿಲ್ಲೆಯಲ್ಲಿ ನಿಯಮಗಳು ಜಾರಿ ಇರಲಿದೆ.
ವೀಕೆಂಡ್ ಲಾಕ್ಡೌನ್ ನಲ್ಲಿ ಸಹ ಬಸ್ ಸಂಚಾರ: ಜಿಲ್ಲೆಯಲ್ಲಿ ನಾಳೆಯಿಂದ ಆರು ಘಂಟೆಗೆ ಎಂದಿನಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತರ್ ಜಿಲ್ಲಾ ಸಂಚಾರದಲ್ಲಿ ಪ್ರಯಾಣಿಕರ ಸಾಂದ್ರತೆಗನುಗುಣವಾಗಿ ಬಸ್ ಗಳನ್ನು ಬಿಡಲು ಸೂಚಿಸಲಾಗಿದ್ದು, ಮೂರು ಜನ ಕೂರುವ ಸೀಟ್ ನಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕರೊನಾ ನಿಯಮ ಪಾಲಿಸಿ ಪ್ರಯಾಣಿಕರು ಪ್ರಯಾಣಿಸಬೇಕಿದೆ.
ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಮಾಡಲಿದ್ದು, ಲಾಕ್ಡೌನ್ ಇರುವ ಜಿಲ್ಲೆಗಳಲ್ಲಿ ಸಂಚಾರ ನಿಬರ್ಂಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 133 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ನಾಲ್ಕು ಜನ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 1,358 ಸಕ್ರಿಯ ಪ್ರಕರಣವಿದೆ. ಇದನ್ನೂ ಓದಿ: ಮಂಗಳೂರಿನ ಕುಪ್ಪೆಪದವಿನಲ್ಲಿ ಗುಡ್ಡ ಕುಸಿತ- ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ