– ಓದಿರುವ ನಾನು ನಿನ್ನ ತಮ್ಮನನ್ನು ಮದುವೆಯಾಗಲ್ಲ
ಹಾಸನ : ಮದುವೆಯಾಗಲು ನಿರಾಕರಿಸಿದ ಸಹೋದರಿಯರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಕುಂಚೇವು ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯೋಗಿತಾ (22) ಹಾಗೂ 17 ವರ್ಷದ ಅಪ್ರಾಪ್ತೆ ಗಂಭೀರವಾಗಿ ಗಾಯಗೊಂಡ ಸಹೋದರಿಯರಾಗಿದ್ದಾರೆ. ಗಾಯಾಳು ಸಹೋದರಿಯರು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗರಾಜ್ ಆಲಿಯಾಸ್ ನಾಗ ಮಚ್ಚಿನಿಂದ ಹಲ್ಲೆ ಮಾಡಿರುವ ಆರೋಪಿಯಾಗಿದ್ದಾನೆ.
ಕಳೆದ ಎರಡು ತಿಂಗಳ ಹಿಂದೆ ಈ ಇಬ್ಬರು ಸಹೋದರಿಯರ ತಂದೆ ಮೃತಪಟ್ಟಿದ್ದರು. ಸಾವಾದ ಮನೆಯಲ್ಲಿ ಒಂದು ವರ್ಷದೊಳಗೆ ಶುಭಕಾರ್ಯ ಮಾಡಬೇಕೆಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಸಹೋದರಿಯರ ಸಂಬಂಧಿಯಾದ ನಾಗರಾಜ್, ಯುವತಿಯರ ತಾಯಿ ಹೇಮಲತ ಅವರ ಬಳಿ ಬಂದು ತನ್ನ ತಮ್ಮ ದಿನೇಶ್ಗೆ ಯೋಗಿತಾಳನ್ನು ಮದುವೆ ಮಾಡಿ ಕೊಡುವಂತೆ ಕೇಳಿದ್ದಾನೆ. ಮನೆಯ ಹಿರಿಯ ಮಗಳಾದ ನನ್ನ ಮೇಲೆ ಸಂಸಾರದ ಜವಾಬ್ದಾರಿ ಇದೆ ಸದ್ಯಕ್ಕೆ ನಾನು ಮದುವೆಯಾಗುವುದಿಲ್ಲ, ತಂಗಿಯನ್ನು ಚೆನ್ನಾಗಿ ಓದಿಸಬೇಕು, ಅಲ್ಲದೆ ಓದಿರುವ ನಾನು ನಿನ್ನ ತಮ್ಮನನ್ನು ಮದುವೆಯಾಗುವುದಿಲ್ಲ ಎಂದು ಮದುವೆಗೆ ನಿರಾಕರಿಸಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ನಾಗರಾಜ್ ನಿನ್ನ ತಂಗಿಯನ್ನಾದರೂ ನನ್ನ ತಮ್ಮನಿಗೆ ಮದುವೆ ಮಾಡಿಕೊಡು ಎಂದು ಒತ್ತಾಯಿಸಿದ್ದು, ಇದಕ್ಕೂ ಸಹೋದರಿಯರಿಬ್ಬರು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ನಾಗರಾಜ್ ಮಚ್ಚಿನಿಂದ ಸಹೋದರಿಯರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ಸಂಬಂಧ ಹಲ್ಲೆ ನಡೆಸಿದ ಆರೋಪಿ ನಾಗರಾಜ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಜ್ಜಿ ಪುಟ್ಟಮ್ಮ, ಸೋದರತ್ತೆ ಅಕ್ಕಮ್ಮನನ್ನು ಬಂಧಿಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.