ತಿರುವನಂತಪುರಂ: ಮದುವೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಒಂದು ಮುಖ್ಯ ಘಟ್ಟ. ಆ ಸಂಭ್ರಮಕ್ಕೆ ಸಾಟಿಯೇ ಇರಲ್ಲ. ಅಂತೆಯೇ ಇಲ್ಲೊಬ್ಬ ತನ್ನ ಮದುವೆಯ ಸಂಭ್ರಮದಲ್ಲಿಯೂ ಸಹಾಯ ಮಾಡಿ ಮಾನವೀಯತೆ ಮೆರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವರ ಮುಸದ್ದಿಕ್ ಅಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮದುವೆಯ ಸಂಭ್ರಮದಲ್ಲಿದ್ದ ಮುಸದ್ದಿಕ್ ವಧು ಮನೆಗೆ ತೆರಳಿದ್ದಾರೆ. ಈ ವೇಳೆ ಅವರಿಗೆ ಫೋನ್ ಕರೆಯೊಂದು ಬಂದಿದೆ. ಅಲ್ಲದೆ ಕೂಡಲೇ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ಕರೆ ಮಾಡಿದವರು ಹೇಳಿದ್ದಾರೆ. ಇದೇ ವೇಳೆ ಮುಸದ್ದಿಕ್ ಮದುವೆ ಸಂಭ್ರಮದಲ್ಲಿರುವ ಮಾಹಿತಿ ಅರಿತ ಕರೆ ಮಾಡಿದವರು, ಪರವಾಗಿಲ್ಲ ಬೇರೆ ಅಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ವರ ಮಾತ್ರ ತನ್ನ ಗೆಳೆಯರೊಂದಿಗೆ ತಕ್ಷಣವೇ ಹೊರಟಿದ್ದಾರೆ.
ವಿಶೇಷವೆಂದರೆ ಮದುವೆಯ ಸಂಭ್ರಮದಲ್ಲಿದ್ದ ವರ ತನ್ನ ಉಡುಗೆಯನ್ನು ಬದಲಿಸಿರಲಿಲ್ಲ. ಉಟ್ಟ ಬಟ್ಟೆಯಲ್ಲೇ ವಯಸ್ಸಾದ ರೋಗಿಗಳನ್ನು ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲಾಯವೂರ್ ಸಿಎಚ್ ಕೇಂದ್ರದ ಸ್ವಯಂಸೇವಕರು ಏಕಾಂಗಿಯಾಗಿ ವಾಸಿಸುತ್ತಿರುವ ವೃದ್ಧರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೀಗ ಸಿಹೆಚ್ ಕೇಂದ್ರದ ಪ್ರತಿನಿಧಿಗಳು, ವೈದ್ಯರು ಹಾಗೂ ಇತರ ಸಿಬ್ಬಂದಿ ಮುಸದ್ದಿಕ್ ಅವರು ತಮ್ಮ ಮದುವೆಯ ದಿನದಂದೇ ನಡೆದುಕೊಂಡ ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.