ಕಾರವಾರ: ಮಥುರಾದ ಕ್ವಾರೆಂಟೈನ್ ಕೇಂದ್ರದಲ್ಲಿದ್ದ ಜಿಲ್ಲೆಯ ಬೆಳ್ತಂಗಡಿಯ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸಂದೇಶ್ ಶೆಟ್ಟಿ (34) ಸಾವನ್ನಪ್ಪಿದ ಯೋಧ. ಸಂದೇಶ್ ರಜೆ ಪಡೆದು ಸ್ವಗ್ರಾಮಕ್ಕೆ ಬಂದಿದ್ದರು. ಕೊರೊನಾ ಲಾಕ್ಡೌನ್ನಿಂದಾಗಿ ವಾಪಸ್ ಹೋಗಲು ಸಾಧ್ಯವಿರಲಿಲ್ಲ. ಸದ್ಯ ಲಾಕ್ಡೌನ್ ಸಡಿಲೆಕೆ ಹಿನ್ನೆಲೆಯಲ್ಲಿ ಅವರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದರು.
ಕೋವಿಡ್-19 ನಿಯಮದ ಪ್ರಕಾರ ಬೇರೆ ರಾಜ್ಯ, ಪ್ರದೇಶದಿಂದ ಬಂದವರು 14 ದಿನಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿ ಇರಬೇಕು. ಅದರಂತೆ ಸಂದೇಶ್ ಅವರು ಕೂಡ ಮಥುರಾದ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದಿದ್ದರು. ಆದರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಂದೇಶ್ ಶೆಟ್ಟಿ ಅವರು ಭಾರತೀಯ ಸೇನೆಯಲ್ಲಿ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅವರ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.