ಹಾವೇರಿ: ಅಭ್ಯರ್ಥಿಪರ ಮತಎಣಿಕೆಗೆ ಏಜೆಂಟ್ ಆಗಿ ಬರುತ್ತಿದ್ದವರ ಕಾರು, ಚಾಲಕನ ನಿಯಂತ್ರಣ ತಪ್ಪಿ ತುಂಗಾಮೇಲ್ದಂಡೆ ಕಾಲುವೆಗೆ ಉರುಳಿ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪ್ರಕಾಶ ಬನ್ನಿಮಟ್ಟಿ(40) ಮತ್ತು ಸಿದ್ದನಗೌಡ ಬಿಷ್ಟನಗೌಡರ(45) ಎಂದು ಗುರುತಿಸಲಾಗಿದೆ. ಇವರು ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿಗಳು.
ಗ್ರಾಮ ಪಂಚಾಯ್ತಿ ಮತ ಎಣಿಕೆ ಹಿನ್ನೆಲೆಯಲ್ಲಿ ಹಾವೇರಿಗೆ ಇಬ್ಬರು ಬರುತ್ತಿದ್ದರು. ಅಭ್ಯರ್ಥಿಯ ಪರವಾಗಿ ಮತ ಎಣಿಕೆಯ ಏಜೆಂಟ್ ಆಗಿ ಪ್ರಕಾಶ ಹಾವೇರಿ ಬರುತ್ತಿದ್ದರು. ಕಾರು ಚಾಲಕನ ನಿಯಂತ್ರಣ ತಪ್ಪಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಉರುಳಿ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತ ದೇಹ ಹಾಗೂ ವಾಹನವನ್ನ ಮೇಲೆ ಎತ್ತುವ ಕಾರ್ಯ ಮಾಡಿದ್ದಾರೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.