– ಹಲ್ಲೆಯಿಂದ ಮಹಿಳೆಯ ಶ್ವಾಸಕೋಸಕ್ಕೆ ಹಾನಿ
– ಪಕ್ಕೆಲುಬು, ಕಾಲುಗಳು ಮುರಿತ
ಲಕ್ನೋ: ದೆಹಲಿಯಲ್ಲಿ ನಿರ್ಭಯಾ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಂತೆ ಇದೀಗ ಅಂಥದ್ದೇ ಮತ್ತೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಹೌದು. ಉತ್ತರ ಪ್ರದೇಶದ ಉಘೈತಿ ಪೊಲೀಸ್ ಠಾಣಾ ಪ್ರದೇಶದಲ್ಲಿರುವ ಮೇವಾಲಿ ಗ್ರಾಮದಲ್ಲಿ ನಡೆದಿದೆ. ಭಾನುವಾರ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಲ್ಲೆಗೈದು ಕೊಲೆ ಮಾಡಿ ಕಾಮುಕರು ತಮ್ಮ ಅಟ್ಟಹಾಸ ಮರೆದಿದ್ದಾರೆ. ಘಟನೆ ಕುರಿತಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಮೂಲಕ ತಮ್ಮ ಕಾಮತೃಷೆ ತೀರಿಸಿಕೊಂಡಿದ್ದಲ್ಲದೆ, ಆಕೆಯ ಖಾಸಗಿ ಅಂಗಕ್ಕೆ ಕಬ್ಬಿಣದ ರಾಡ್ ನ್ನು ತುರುಕಿ ಕ್ರೂರತೆ ಮೆರೆದಿದ್ದಾರೆ. ಇದರಿಂದ ಮಹಿಳೆಯ ಶ್ವಾಸಕೋಶ ಪಂಕ್ಚರ್ ಆಗಿದೆ. ಅಲ್ಲದೆ ಮಹಿಳೆಯ ಪೆಕ್ಕೆಲುಬುಗಳು ಮತ್ತು ಕಾಲುಗಳನ್ನು ಆರೋಪಿಗಳು ಮುರಿದಿರುವುದು ಕಂಡುಬಂದಿದೆ.
ಮಹಿಳಾ ವೈದ್ಯರು ಸೇರಿದಂತೆ ಮೂವರು ವೈದ್ಯರು ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿದರು. ವೈದ್ಯರ ವರದಿಯ ಪ್ರಕಾರ ಮಹಿಳೆಯ ಖಾಸಗಿ ಅಂಗಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತ ಸ್ರಾವವಾಗಿದೆ. ಯಾವುದೋ ಭಾರವಾದ ವಸ್ತುವಿನಿಂದ ಆಕೆಯ ಖಾಸಗಿ ಅಂಗಕ್ಕೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿದ ಬಡಾನ್ ಎಸ್ಎಸ್ಪಿ ಸಂಕಲ್ಪ ಶರ್ಮಾ, ಕುಟುಂಬಸ್ಥರ ದೂರಿನ ಮೇರೆಗೆ ಮೂರು ಮಂದಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲು 3 ತಂಡಗಳನ್ನು ರಚಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ಕುರಿತಂತೆ ಆರೋಪಿಗಳಾದ ಮಹಂತ್ ಬಾಬಾ ಸತ್ಯ ನಾರಾಯಣ, ಅವರ ಶಿಷ್ಯ ವೇದಂ ಮತ್ತು ಚಾಲಕ ಜಸ್ಪಾಲ್ ಅವರನ್ನು ಹುಡುಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.
ಮಹಿಳೆ ಭಾನುವಾರ ಸಂಜೆ ಮನೆಯ ಹತ್ತಿರದ ಹಳ್ಳಿಯ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಳು. ದೇವಸ್ಥಾನಕ್ಕೆ ಹೋದವಳು ಮತ್ತೆ ಹಿಂದಿರುಗಲಿಲ್ಲ. ಆರೋಪಿಗಳು ಅತ್ಯಾಚಾರ ನಡೆಸಿ ಆಕೆಯ ದೇಹವನ್ನು ರಾತ್ರಿ 12 ಗಂಟೆ ಸುಮಾರಿಗೆ ಮನೆಯ ಹೊರಗೆ ಬಿಸಾಕಿ ಪರಾರಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.