ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ರಣಕೇಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಲಾಕ್ಡೌನ್ ಆಗುತ್ತೆ ಎಂಬ ವದಂತಿ ಹರದಾಡುತ್ತಿದೆ. ಈ ಕುರಿತು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ತೆರೆ ಹೆಳೆದಿದ್ದಾರೆ.
ಬೆಂಗಳೂರು ಹೊರವಲಯದ ದಾಸರಹಳ್ಳಿಯ ಮೇದರಹಳ್ಳಿಯಲ್ಲಿ ಸುಮಾರು 2 ಸಾವಿರ ಬಡ ಜನರಿಗೆ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ದಿನಸಿ ಪದಾರ್ಥಗಳ ಕಿಟ್ ವಿತರಣೆ ನಂತರ ಮಾತನಾಡಿದ ಅವರು, ಲಾಕ್ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ಮಾಡಿಲ್ಲ, ಕೇಂದ್ರ ಸರ್ಕಾರ ಮತ್ತು ಡಬ್ಲ್ಯೂಎಚ್ಒ ತೀರ್ಮಾನದ ಮೇಲೆ ರಾಜ್ಯದ ತೀರ್ಮಾನ ಅವಲಂಬಿತವಾಗಿದೆ. ಹೆಚ್ಚು ರೋಗ ಹರಡುತ್ತಿರುವ ಕಡೆ ಲಾಕ್ಡೌನ್ ಮಾಡಿದರೆ ತಪ್ಪಾಗಲಾರದು, ಈ ವಿಚಾರದಲ್ಲಿ ಪ್ರಧಾನ ಮಂತ್ರಿ ರಾಜ್ಯದ ಮುಖ್ಯಮಂತ್ರಿ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದ್ದು, ಅದೃಷ್ಟವಶಾತ್ ನಮ್ಮ ರಾಜ್ಯದಲ್ಲಿ ಸೋಂಕಿತರಿಗಿಂತ ಗುಣಮುಖರಾಗಿರುವವರ ಸಂಖ್ಯೆ ಹೆಚ್ಚಿದೆ. ದೆಹಲಿ, ಮುಂಬೈನಲ್ಲಿ ನಿಯಂತ್ರಣ ತಪ್ಪಿರುವ ಕಡೆ ಲಾಕ್ಡೌನ್ ಮಾಡಿದರೆ ತಪ್ಪಿಲ್ಲ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ವೈದ್ಯರಿಗೆ, ನಸ್9 ಗಳಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ನೀಡಿರುವ ಕುರಿತು ತನಿಖೆಯಾಗಲಿದೆ ಎಂದು ಇದೇ ವೇಳೆ ತಿಳಿಸಿದರು. ಈ ವೇಳೆ ದಾಸರಹಳ್ಳಿಯ ಮಾಜಿ ಶಾಸಕ ಎಸ್. ಮುನಿರಾಜು, ಶ್ರೀ ಸಾಯಿ ಫೌಂಡೇಶನ್ ಮಾಲೀಕ ಬಿ.ಸುರೇಶ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.