– ಸ್ಪರ್ಧಿಗಳಲ್ಲಿಯೇ ಯಾರಾದ್ರು ಮಾಡಿದ್ದಾರೆ ಎನ್ನುವ ಶಂಕೆ
– ಕುಡಿಕೆ ಹೂತಿಟ್ಟು ಪೊಜೆ
ಹಾಸನ: ಮತದಾನ ಮಾಡುವ ಜಾಗದಲ್ಲಿ ವಾಮಾಚಾರ ಮಾಡಿದ್ದು, ಇದರಿಂದ ಕೋಪಗೊಂಡ ಮಹಿಳೆಯರು ಕೈಯಲ್ಲಿ ಚಪ್ಪಲಿ ಹಿಡಿದು ಆಕ್ರೋಶ ಹೊರಹಾಕುತ್ತಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ, ಹುಲ್ಲಂಗಾಲ ಗ್ರಾಮದಲ್ಲಿ ಕಂಡುಬಂದಿದೆ.
ನಾಳೆ ಗ್ರಾಮಪಂಚಾಯಿತಿ ಚುನಾವಣೆ ನಡೆಯಲಿದ್ದು, ಹುಲ್ಲಂಗಾಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಯಾರೋ ಕಿಡಿಗೇಡಿಗಳು ಶಾಲೆಯ ಸುತ್ತ ಹಲವೆಡೆ ಕುಡಿಕೆ ಹೂತಿಟ್ಟು ಪೂಜೆ ಸಲ್ಲಿಸಿ ವಾಮಾಚಾರ ಮಾಡಿದ್ದಾರೆ.
ಈ ವಿಚಾರ ತಿಳಿದು ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಆತಂಕ ಹೊರಹಾಕುತ್ತಿದ್ದಾರೆ. ಮತದಾನ ಮಾಡುವ ಸ್ಥಳದ ಬಳಿ ವಾಮಾಚಾರ ಮಾಡಿದ್ದಾರೆ. ಇದರಿಂದ ಮತ ಹಾಕಲು ಬರಲು ಭಯವಾಗುತ್ತಿದೆ. ಇಂತಹ ಕೆಲಸ ಮಾಡಿರುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಮಹಿಳೆಯರು ಕೈಯಲ್ಲಿ ಚಪ್ಪಲಿ ಹಿಡಿದು ಆಕ್ರೋಶ ಹೊರಹಾಕುತ್ತಿದ್ದಾರೆ.
ಮತದಾನ ಮಾಡುವ ಜಾಗದಲ್ಲಿ ವಾಮಾಚಾರ ಮಾಡಿರುವವರು ಯಾರು ಎಂಬುದು ತಿಳಿದುಬಂದಿಲ್ಲ. ಆದರೆ ಚುನಾವಣೆಗೆ ಸ್ಪರ್ಧಿಸಿರುವವರೆಲ್ಲೇ ಯಾರೋ ಒಬ್ಬರು ಈ ರೀತಿ ಮಾಡಿರಬಹುದು ಎಂಬ ಬಗ್ಗೆ ಗ್ರಾಮಸ್ಥರಲ್ಲಿ ಗುಸುಗುಸು ಆರಂಭವಾಗಿದೆ.