– ಮುಂಜಾಗೃತೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ- ಡಿಎಚ್ ಒ
ಉಡುಪಿ: ಕರ್ನಾಟಕದಲ್ಲಿ ಕೊರೊನಾ ಮಹಾಮಾರಿಯ ಎರಡನೇ ಅಲೆ ಬೀಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೊರೊನ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಳೆದ ಎರಡು ತಿಂಗಳಿಂದ ಒಂದಂಕಿಯಲ್ಲಿದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೂರಂಕಿಯತ್ತ ಮುನ್ನುಗ್ಗುತ್ತಿದೆ. ಮಣಿಪಾಲ ವಿವಿಯ ಎಂಐಟಿ ಇಂಜಿನಿಯರಿಂಗ್ ಕ್ಯಾಂಪಸ್ ನಲ್ಲಿ ನೂರರ ಗಡಿಯಲ್ಲಿ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ನಗರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಂಡಿದೆ.
ಉಡುಪಿಯಲ್ಲಿ ಕಳೆದ ನಾಲ್ಕು ದಿನದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಣಿಪಾಲ ವಿವಿಯ ಕ್ಯಾಂಪಸ್ ನಲ್ಲಿ ಒಟ್ಟು 95 ಕೇಸುಗಳು ಪತ್ತೆಯಾಗಿವೆ. ಮಣಿಪಾಲ ಕ್ಯಾಂಪಸ್ ಅನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಐಡಿ ಕಾರ್ಡ್ ಇದ್ದವರಿಗೆ ಮಾತ್ರ ಕ್ಯಾಂಪಸ್ಗೆ ಎಂಟ್ರಿ ಕೊಡಲಾಗುತ್ತಿದೆ.
ಎಂಐಟಿ ಕ್ಯಾಂಪಸ್ ನ 5000 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ನಡೆಸಲಾಗುತ್ತದೆ. ಒಂದು ವಾರ ನಿರಂತರ ಕೋವಿಡ್ ಟೆಸ್ಟ್ ಮಾಡುತ್ತೇವೆ. ನಗರ ಭಾಗದಲ್ಲಿ ಹೆಚ್ಚು ಪಾಸಿಟಿವ್ ಕೇಸುಗಳು ಪತ್ತೆಯಾಗುತ್ತಿವೆ. ಸಾರ್ವಜನಿಕ ಸ್ಥಳ, ಸಮಾರಂಭಗಳಲ್ಲಿ ನಿಗಾವಹಿಸಿ. ಮಾಸ್ಕ್ ಸಾಮಾಜಿಕ ಅಂತರ ಸ್ಯಾನಿಟೈಸ್ ಕಡ್ಡಾಯಗೊಳಿಸಿ. ಉಡುಪಿಯಲ್ಲಿ ಕೊರೊನಾ ಎರಡನೇ ಅಲೆ ಮರುಕಳಿಸಲು ಅವಕಾಶ ಕೊಡಬೇಡಿ ಎಂದು ಉಡುಪಿ ಡಿಹೆಚ್ ಓ ಡಾ. ಸುಧೀರ್ ಚಂದ್ರಚೂಡ ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವೈದ್ಯಾಧಿಕಾರಿಗಳ ಸಭೆ ನಡೆಸಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ಜನರ ಮೇಲೆ ನಿಗಾವಹಿಸಲಾಗುವುದು. ವಿದೇಶದಿಂದ ವಾಪಸ್ಸಾದವರ ಮಾಹಿತಿಗಳನ್ನು ಕಲೆ ಹಾಕಿ ಕೊರೊನ ಲಕ್ಷಣಗಳು ಕಂಡು ಬಾರದಿದ್ದರೂ ಅವರ ಕುಟುಂಬಸ್ಥರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಡ್ಡಾಯ ಐಸೋಲೇಶನ್ ನಿಯಮ ಪಾಲಿಸಿ ಎಂದು ಡಿಎಚ್ಸಒ ಅಧಿಕಾರಿಗಳಿಗೆ ಹೇಳಿದ್ದಾರೆ.