ಮಡಿಕೇರಿ: ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲಿ ಲಾಕ್ಡೌನ್ ಮಾಡಲಾಗಿತ್ತು. ನಾಳೆಯಿಂದ ಎರಡೂವರೆ ತಿಂಗಳ ಬಳಿಕ ಧಾರ್ಮಿಕ ಕೇಂದ್ರಗಳು ತೆರೆಯುತ್ತಿವೆ. ಆದರೆ ಮಡಿಕೇರಿಯಲ್ಲಿ ಎಲ್ಲಾ ಮಸೀದಿಗಳು ಇನ್ನೂ ಒಂದು ತಿಂಗಳು ತೆರೆಯುವುದಿಲ್ಲ.
ಕೊಡಗು ಮುಸ್ಲಿಂ ಜಮಾತ್ ಒಕ್ಕೂಟ ಈ ನಿರ್ಧಾರ ಕೈಗೊಂಡಿದ್ದು, ಜುಲೈ 5 ರವೆಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧ ಮಾಡಲಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ಜಮಾತ್ ಒಕ್ಕೂಟ ನಿರ್ಧರಿಸಿದೆ. ಕೊಡಗಿನಲ್ಲಿ 150ಕ್ಕೂ ಹೆಚ್ಚು ಮಸೀದಿಗಳಿದ್ದು, ಮಡಿಕೇರಿ ನಗರದಲ್ಲಿ 14 ಮಸೀದಿಗಳಿವೆ. ಮಡಿಕೇರಿ ನಗರದ 14 ಮಸೀದಿಗಳು ಕೂಡ ಈ ನಿರ್ಧಾರವನ್ನು ಒಪ್ಪಿಕೊಂಡಿವೆ.
ಇದೇ ನಿಯಮವನ್ನು ಕೊಡಗಿನ ಎಲ್ಲಾ ಮಸೀದಿಗಳು ಅನುಸರಿಸುವ ಸಾಧ್ಯತೆ ಇದೆ. ಮಡಿಕೇರಿ ನಗರ ಜಿಲ್ಲಾ ಕೇಂದ್ರವಾಗಿದ್ದು, ಜೊತೆಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಜನರು ಬಂದು ಹೋಗುವುದು ಇರುತ್ತದೆ. ಹೀಗಾಗಿ ಇದು ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಿರುವುದಾಗಿ ಜಮಾತ್ ಒಕ್ಕೂಟಗಳ ಅಧ್ಯಕ್ಷ ಹನೀಫ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ