ಮಡಿಕೇರಿ: ಕೊರೊನಾ ಕಾರಣದಿಂದ ಜೈಲುಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆ ಮಾಡುವ ಸುಪ್ರೀಂ ಕೋರ್ಟ್ ಆದೇಶದನ್ವಯ ಮಡಿಕೇರಿ ನಗರದ ಹೋರ ಹೋಲಯದಲ್ಲಿ ಇರುವ ಜಿಲ್ಲಾ ಕಾರಾಗೃಹದಿಂದ 12 ಕೈದಿಗಳನ್ನು 90 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜೈಲುಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟು ಕಳೆದ ವರ್ಷದ ಮಾರ್ಚ್ನಲ್ಲಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿ ಸಮಿತಿಯನ್ನು ರಚಿಸುವಂತೆ ಸೂಚಿಸಿತ್ತು. ಈ ಸಮಿತಿಯಲ್ಲಿ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಪೊಲೀಸ್ ಅಧಿಕಾರಿ, ಜೈಲು ಸೂಪರಿಂಟೆಂಡೆಂಟ್ ಹಾಗೂ ಸರ್ಕಾರಿ ಅಭಿಯೋಜಕರು ಇದ್ದು, ಜೈಲಿನಿಂದ ಬಿಡುಗಡೆ ಆಗಬೇಕಾದ ಕೈದಿಗಳನ್ನು ಈ ಸಮಿತಿ ತೀರ್ಮಾನಿಸುತ್ತದೆ. ಸುಪ್ರೀಂ ನಿರ್ದೇಶನದನ್ವಯ 7 ವರ್ಷಗಳ ಜೈಲು ಶಿಕ್ಷೆಗಿಂತ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಲಾಗುವ ಪ್ರಕರಣಗಳ ಅಡಿಯಲ್ಲಿ ಅಪರಾಧ ಎಸಗಿ ವಿಚಾರಣಾಧೀನ ಕೈದಿಗಳಾಗಿರುವವರನ್ನು ಪೆರೋಲ್ಗೆ ಪರಿಗಣಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ಮಡಿಕೇರಿ ಜೈಲು ಸೂಪರಿಂಟೆಂಡೆಂಟ್ ರವಿ ಅವರು ಮೂರು ದಿನಗಳ ಹಿಂದೆ ಸಮಿತಿಯು 12 ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದೆ. ಪ್ರಸ್ತುತ ಜೈಲಿನಲ್ಲಿ 123 ಖೈದಿಗಳಿದ್ದು ಒಟ್ಟು 270 ಖೈದಿಗಳನ್ನು ಇರಿಸಲು ಸ್ಥಳಾವಕಾಶ ಇದೆ ಎಂದು ಹೇಳಿದರು.