ಹಾವೇರಿ: ಮಗನ ಮದುವೆ ಹಿನ್ನೆಲೆಯಲ್ಲಿ ಬೀದಿಯಲ್ಲಿ ಕೆಲಸ ಮಾಡೋ ಚಮ್ಮಾರರಿಗೆ ಹಾಗೂ ಕಲ್ಲು ಕೆತ್ತನೆ ಮಾಡೋ ಜನರಿಗೆ ಲಗ್ನಪತ್ರಿಕೆಯೊಂದಿಗೆ ಸೀರೆಯನ್ನು ನೀಡಿ ಆಮಂತ್ರಿಸುವ ಮೂಲಕ ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಗಮನ ಸೆಳೆದಿದ್ದಾರೆ.
ನಗರದ ಬಸನಿಲ್ದಾಣದ ಬಳಿ 10 ಕ್ಕೂ ಅಧಿಕ ಚಮ್ಮಾರ ಕುಟುಂಬ ವಾಸವಿದ್ದು, ತಮ್ಮ ವೃತ್ತಿಯನ್ನು ನಿರ್ವಹಿಸಿಕೊಂಡು ಊರಿನಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಈ ಶ್ರಮಿಕ ವರ್ಗದ ಮಹಿಳೆಯರಿಗೆ ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯೊಂದಿಗೆ ಸೀರೆಯನ್ನು ನೀಡಿ ಆತ್ಮೀಯವಾಗಿ ಆಹ್ವಾನ ನೀಡುವ ಮೂಲಕ ಮೇಗಳಮನಿ ಇತರರಿಗೆ ಮಾದರಿಯಾಗಿದ್ದಾರೆ.
ನಗರದ ಕೆ.ಇ.ಬಿ.ಕಲ್ಯಾಣ ಮಂಟಪದ ಹತ್ತಿರ ಬೀದಿಯಲ್ಲಿ ಕಲ್ಲು ಕತ್ತನೆ ಮಾಡುವ ಕುಟುಂಬ ಸದಸ್ಯರ ಬಳಿ ಬಂದ ಮೇಗಳಮನಿ ಅಲ್ಲಿದ್ದ ಮಹಿಳೆಯರಿಗೂ ಮದುವೆ ಆಮಂತ್ರಣ ಪತ್ರಿಕೆ ಹಾಗೂ ಸೀರೆ ನೀಡಿ, ಪುತ್ರ ಶ್ರೀಧರನ ಮದುವೆ ಇದೇ ತಿಂಗಳ 14 ಭಾನುವಾರದಂದು ನಡೆಯಲಿದೆ. ಮದುವೆಗೆ ಎಲ್ಲರೂ ಬನ್ನಿ ಎಂದು ಪ್ರೀತಿಯಿಂದ ಕರೆದಿದ್ದಾರೆ.