– ಜೊತೆಯಲ್ಲಿದ್ದ ಮತ್ತೋರ್ವ ಮಗಳು ಬಚಾವ್
ಹೈದರಾಬಾದ್: ಮಕ್ಕಳಿಬ್ಬರನ್ನ ನದಿಗೆ ತಳ್ಳಿದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮಹಬೂಬನಗರ ಜಿಲ್ಲೆಯ ಹಂವಾಡ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ. ತಾಯಿ ಅಕ್ಕ ಮತ್ತು ತಮ್ಮನನ್ನು ನದಿಗೆ ಎಸೆಯೋದನ್ನ ಕಂಡು ಮತ್ತೋರ್ವ ಮಗಳು ಅಮ್ಮನಿಂದ ತಪ್ಪಿಸಿಕೊಂಡು ಓಡಿ ಹೋಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
28 ವರ್ಷದ ಯಲ್ಲಮ್ಮ ಮಕ್ಕಳಿಬ್ಬರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. 10 ವರ್ಷಗಳ ಹಿಂದೆ ಯಲ್ಲಮ್ಮ ಮದುವೆ ಸತ್ಯಪ್ಪ ಎಂಬಾತನ ಜತೆ ನಡೆದಿತ್ತು. ದಂಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ರಂಜಿತಾ (8), ಅನಿತಾ (6) ಮತ್ತು ರಾಜು (4) ಮೂರು ಮಕ್ಕಳಿದ್ದರು. ಆರ್ಥಿಕ ಸಂಕಷ್ಟ ಮತ್ತು ಪತಿ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತ ಯಲ್ಲಮ್ಮ ಮೂರು ಮಕ್ಕಳ ಜೊತೆ ಮನೆಯಿಂದ ಹೊರ ಬಂದಿದ್ದಳು.
ಊರಿಗೆ ತೆರಳುವ ಮಾರ್ಗ ಮಧ್ಯೆ ರಂಜಿತಾ ಮತ್ತು ರಾಜುನನ್ನು ನದಿಗೆ ಎಸೆದಿದ್ದಾಳೆ. ಇದನ್ನ ಕಂಡ ಅನಿತಾ ಅಮ್ಮನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ಅನಿತಾ ಸಿಗದ ಹಿನ್ನೆಲೆ ಯಲ್ಲಮ್ಮ ಸಹ ನದಿಗೆ ಧುಮುಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನ ನದಿಯಿಂದ ಹೊರ ತೆಗೆದಿದ್ದಾರೆ.