ಬೆಂಗಳೂರು: ಅನಿವಾಸಿ ಕನ್ನಡಿಗರು ಎಲ್ಲೇ ಇದ್ದರೂ ತಮ್ಮ ಮಕ್ಕಳಿಗೆ ಕನ್ನಡದ ಸಾಂಸ್ಕೃತಿಕ ವಾತಾವರಣ ಕಟ್ಟಿಕೊಡಿ. ಕನ್ನಡಿಗರು ಎಲ್ಲಿ ಇದ್ದರೂ ಕೂಡ ತಮ್ಮ ಭಾಷಾ ಕೌಶಲ್ಯವನ್ನು ವೃದ್ಧಿಸಿಕೊಂಡು ಕನ್ನಡದ ಹಿರಿಮೆ-ಗರಿಮೆಯನ್ನು ಎತ್ತಿ ಹಿಡಿದು ಕನ್ನಡ ರಾಯಭಾರಿಗಳಾಗುವವರು ನಮ್ಮ ನಾಡಿನ ಹೆಮ್ಮೆಯ ಪ್ರತೀಕ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಾಭರಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಲಾಸ್ ಏಂಜಲೀಸ್ನ ಆರೆಂಜ್ ಕೌಂಟಿಯ ಕನ್ನಡ ಶಾಲೆಯ ಗ್ರಾಜ್ಯುಯೇಷನ್ ಡೇ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಇಂದು ಮುಖ್ಯ ಅತಿಥಿಯಾಗಿ ಮಾತನಾಡಿದ ನಾಗಾಭರಣ ಅವರು, ಕನ್ನಡಿಗರು ತಾವಿರುವಲ್ಲಿಯೇ ಕನ್ನಡದ ವಾತಾವರಣ ನಿರ್ಮಿಸಿಕೊಂಡು ತಮ್ಮ ಮಕ್ಕಳಿಗೆ ತಾಯ್ನಾಡಿನ ಸಾಂಸ್ಕೃತಿಕ ವಾತಾವರಣವನ್ನು ಕಟ್ಟಿಕೊಡುವಂತೆ ಸಲಹೆ ನೀಡಿದರು. ಇದನ್ನೂ ಓದಿ: ಕನ್ನಡಿಗರಿಗೆ ಕಡ್ಡಾಯವಾಗಿ ಕೆಲಸ ಸಿಗುವಂತೆ ಮಾಡಬೇಕಿದೆ: ನಾಗಾಭರಣ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಕವಿತೆಯ ಸಾಲುಗಳನ್ನು ಮಕ್ಕಳಿಗೆ ನೆನಪಿಸುವ ಮೂಲಕ ಕನ್ನಡದ ಕಂಪನ್ನು ಪಸರಿಸಿ ಅನಿವಾಸಿ ಕನ್ನಡಿರಿಗರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ನಟ, ನಾವಿಕ ಸಂಘಟಕರಾದ ವಲ್ಲೀಶ್ ಶಾಸ್ತ್ರಿ, ಆರೆಂಜ್ ಕೌಂಟಿಯ ಶ್ರೀಧರ ರಾಜಣ್ಣ, ಶ್ರೀನಿವಾಸ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.